ಮಂಜನಾಡಿ: ಪರ್ತಿಪ್ಪಾಡಿ ಮಹ್ಮೂದ್ ಹಾಜಿ ಮನೆತನ ಅಂದರೆ ಇಡೀ ಜಿಲ್ಲೆಯಲ್ಲೇ ಹೆಸರುವಾಸಿ. ಶ್ರೀಮಂತಿಕೆ, ನ್ಯಾಯ ನಿಷ್ಠುರತೆ, ಸಾಮಾಜಿಕ, ಧಾರ್ಮಿಕ ಕೊಡುಗೆ ಮುಂತಾದ ಹತ್ತು ಹಲವು ವಿಷಯಗಳಲ್ಲಿ ಮುಂಚೂಣಿಯಲ್ಲಿದ್ದ ಈ ಹೆಸರಾಂತ ಕುಟುಂಬದ ಹಾಜಿ ಪಿ.ಎಮ್. ಹಮೀದ್ ಹಾಜಿ ಪರ್ತಿಪ್ಪಾಡಿಯವರು 2006 ರ ಪವಿತ್ರ ರಮಳಾನ್ ಮಾಸದಲ್ಲಿ ಅಗಲಿದಾಗ ಇಡೀ ನಾಡು ತಲ್ಲಣಗೊಂಡಿತ್ತು.

ಎಲ್ಲಾ ವಿಷಯಗಳಲ್ಲೂ ಮುಂಚೂಣಿಯಲ್ಲಿದ್ದ ಅವರ ಮರಣ ಓರ್ವ ಧೀಮಂತ ನಾಯಕನ ಅಗಲಿಕೆ ಎಂಬುದರ ಜೊತೆಗೆ ಬರೀ 48 ವರ್ಷ ಪ್ರಾಯದಲ್ಲೇ ಆಕಸ್ಮಿಕ ಅಗಲಿಕೆ ಎಂಬುದು ಶೋಕವನ್ನು ಇಮ್ಮಡಿಗೊಳಿಸಿತ್ತು.
ಪರ್ತಿಪ್ಪಾಡಿ ಮನೆತನವನ್ನು ಹೆಸರುವಾಸಿಗೊಳಿಸಿದ್ದ ಇವರ ತಂದೆಯವರಾದ ಮಹ್ಮೂದ್ ಹಾಜಿ ಮತ್ತು ನನ್ನ ತಂದೆಯವರು ಬಾಲ್ಯ ಸ್ನೇಹಿತರಾಗಿದ್ದರು. ಅಲ್ಲದೆ ಅವರ ವ್ಯಾಪಾರೋದ್ಯಮದಲ್ಲಿ ಜೊತೆಯಾಗಿ ತಂದೆಯವರು ಕೆಲವು ಕಾಲ ದುಡಿದಿದ್ದರು. ಪ್ರಸ್ತುತ ಹಮೀದ್ ಹಾಜಿಯವರು ಅವರ ತಂದೆಯವರ ಮರಣಾ ನಂತರ ಕೂಡಾ ನನ್ನ ತಂದೆಯವರೊಡನೆ ಬಹಳ ಆತ್ಮೀಯತೆ ಹೊಂದಿದ್ದರು. ತಂದೆಯವರ ಆಪ್ತ ಎಂಬ ನೆಲೆಯಲ್ಲಿ ಯಾವತ್ತೂ ಪ್ರೀತ್ಯಾದರ ತೋರುತ್ತಿದ್ದರು.
ನಾವು ಕಲ್ಕಟ್ಟದಲ್ಲಿ ಹೊಸ ಮನೆ ಕಟ್ಟಿಸುವ ಸಂದರ್ಭದಲ್ಲಿ ಎದುರಾದ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎರಡೇ ದಿನಗಳಲ್ಲಿ ಪರಿಹರಿಸಿ ಕೊಟ್ಟಿದ್ದರು. 1994 ರಿಂದ 2005 ರ ವರೆಗೆ ನಿರಂತರವಾಗಿ ಮಂಡಲ ಪಂಚಾಯತ್ ಪ್ರೆಸಿಡೆಂಟ್ ಸ್ಥಾನ ನಿರ್ವಹಿಸಿದ್ದ ಹಮೀದ್ ಹಾಜಿಯವರು ಆ ಕಾಲಾವಧಿಯಲ್ಲಿ ಅವರು ಸಲ್ಲಿಸಿದ್ದ ಸೇವೆಗಳು ಅಮೋಘವಾಗಿದ್ದವು.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗಗಳಲ್ಲಿ ನಿಸ್ವಾರ್ಥ ಕೊಡುಗೆಗಳನ್ನು ನೀಡಿದ್ದ ಅವರು ಜಾತಿಮತ ಬೇಧವಿಲ್ಲದೆ ಸರ್ವರ ಮನ್ನಣೆಗೆ ಪಾತ್ರರಾಗಿದ್ದಾರೆ. ಪಂಚಾತಿಕೆಯ ವಿಷಯದಲ್ಲಿ ಇವರು ತನ್ನ ತಂದೆಯವರಾದ ಮಹ್ಮೂದ್ ಹಾಜಿಯವರ ಹಾಗೆಯೇ ಬಹಳ ಮುತ್ಸದ್ಧಿತನ ಹೊಂದಿದ್ದರು. ಮಹ್ಮೂದ್ ಹಾಜಿಯವರು ಇದ್ದಾಗ ಯಾವುದೇ ವ್ಯಾಜ್ಯಕ್ಕೆ ಕೋರ್ಟು ಕಭೇರಿ ಅಲೆದಾಡಬೇಕಾಗಿರಲಿಲ್ಲ, ಎಲ್ಲವೂ ಅವರ ನ್ಯಾಯಚಾವಡಿಯಲ್ಲಿ ಇತ್ಯರ್ಥವಾಗುತ್ತಿತ್ತು ಎಂದು ಹಿರಿಯರು ಈಗಲೂ ಹೇಳುತ್ತಿದ್ದಾರೆ. ಹೆಚ್ಚಿನಂಶ ಅದೇ ಛಾಪನ್ನು ಪುತ್ರ ಹಮೀದ್ ಹಾಜಿಯವರೂ ಹೊಂದಿದ್ದರು.
ಇದೀಗ ಹಮೀದ್ ಹಾಜಿಯವರ ಪುತ್ರ ಇಫ್ತಿಖಾರ್ ಅದೇ ಹೆಜ್ಜೆಯಲ್ಲಿ ಮುನ್ನಡೆಯುತ್ತಿದ್ದಾರೆ. ತನ್ನ ತಂದೆ, ತಾತನ ಕಾಲದಿಂದಲೇ ಮುಂದುವರಿದ ಮನೆತನದ ಹಿರಿತನವನ್ನು ಮುಂದುವರಿಸುವ ಲಕ್ಷಣಗಳು ಇವರಲ್ಲೂ ಗೋಚರವಾಗುತ್ತಿದೆ. ಅಲ್ಲಾಹು ತೌಫೀಖ್ ನೀಡಲಿ. ಹಮೀದ್ ಹಾಜಿಯವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. (ಆಮೀನ್ ಯಾರಬ್ಬಲ್ ಆಲಮೀನ್)
ಡಿ.ಐ. ಅಬೂಬಕರ್ ಕೈರಂಗಳ


