ಮೂಡಬಿದಿರೆ: ಕಡಲಕೆರೆ ಬಳಿ ಇರುವ ಪ್ರೇರಣಾ ಶಾಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ನ 2026-27 ನೆಯ ಸಾಲಿನ ಯಕ್ಷಶಿಕ್ಷಣ ತರಗತಿಯನ್ನು ಅಲಂಗಾರಿನ ಶ್ರೀ ಮಹಾಗಣಪತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ಭಟ್ ಅವರು ಉದ್ಘಾಟಿಸಿದರು. “ಬಾಲ್ಯದಲ್ಲಿ ನಮಗಿಲ್ಲದ ಅವಕಾಶ ಎಳೆಯ ಮಕ್ಕಳಾದ ನಿಮಗೆ ಒದಗಿ ಬಂದಿರುವುದು ಸುವರ್ಣಾವಕಾಶ. ಪುರಾಣದಲ್ಲಿ ಬರುವ ಕತೆಗಳನ್ನು ನಾವು ಅರಿತರೆ ಸುಸಂಸ್ಕೃತ ರಾಗುತ್ತೇವೆ” ಎಂದರು.

ಯಕ್ಷಶಿಕ್ಷಣದ ಮೂಡಬಿದಿರೆ-ಕಾರ್ಕಳ ವಲಯದ ಸಂಚಾಲಕರಾದ ಮಹಾವೀರ ಪಾಂಡಿ ಅವರು ಮಾತನಾಡಿ” ವಿದ್ಯಾರ್ಥಿಗಳಿಗೆ ಯಕ್ಷಗಾನದ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಶ್ರಮಿಸುತ್ತಿದೆ. 102 ಶಾಲೆಗಳಲ್ಲಿ ಸುಮಾರು 7500 ವಿದ್ಯಾರ್ಥಿಗಳು 70 ಯಕ್ಷಗುರುಗಳ ತೊಡಗಿಸುವಿಕೆಯ ಮೂಲಕ ಯಕ್ಷಶಿಕ್ಷಣವು ಯಶಸ್ವಿಯಾಗುತ್ತಿದೆ” ಎಂದು ಹೇಳಿದರು. ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಎಂ. ಶಾಂತಾರಾಮ ಕುಡ್ವ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಪಟ್ಲ ಫೌಂಡೇಶನ್ ನ ಮೂಡುಬಿದಿರೆ ಘಟಕದ ಸಂಚಾಲಕ ಲಾಡಿ ರವಿಪ್ರಸಾದ್ ಶೆಟ್ಟಿ, ಜತೆ ಕಾರ್ಯದರ್ಶಿ ನೆಲ್ಲಿಮಾರ್ ಸದಾಶಿವ ಭಟ್ ಸಂದರ್ಭೋಚಿತವಾಗಿ ಮಾತನಾಡಿದರು. ಪಟ್ಲ ಫೌಂಡೇಶನ್ ನ ಮೂಡಬಿದಿರೆ ಘಟಕದ ಅಧ್ಯಕ್ಷ ದಿವಾಕರ ಶೆಟ್ಟಿ ಖಂಡಿಗ, ಕಾರ್ಯದರ್ಶಿ ಅರುಣ್ ಕುಮಾರ್, ಸೇವಾಂಜಲಿ ಶಿಕ್ಷಣ ಸಂಸ್ಥೆಯ ಕೋಶಾಧಿಕಾರಿ ಎಸ್.ಎನ್. ಬೋರ್ಕರ್, ಯಕ್ಷ ಶಿಕ್ಷಕ ಪ್ರಥ್ವೀಶ್ ಪರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ವತ್ಸಲಾ ರಾಜೇಶ್ ಸ್ವಾಗತಿಸಿದರೆ ಶಿಕ್ಷಕಿ ಗ್ರೀಷ್ಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರಿಯಾ ವಂದನಾರ್ಪಣೆಗೈದರು.


