ಕಂಬಳಪದವು: ಅಸಾಂಕ್ರಾಮಿಕ ರೋಗಗಳಿಗೆ ನಾವೇ ಮೂಲ ಕಾರಣ. ಈ ಕಾಯಿಲೆ ತಡೆಯುವ ನಿಟ್ಟಿನಲ್ಲಿ ಸರ್ಕಾರದಿಂದ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಎಚ್.ಆರ್. ಹೇಳಿದರು.

ಬ್ಲೂಲೈನ್ ಫುಡ್ಸ್ ಇಂಡಿಯಾ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದಲ್ಲಿ ಕಂಬಳಪದವು ಖಾಸಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಿಗದಿತ ಸಮಯದಲ್ಲಿ ತಪಾಸಣೆ ನಡೆಸುವುದು ಮುಖ್ಯ, ಇದರಿಂದ ರೋಗ ಇರುವುದು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯ. ಸಾಕಷ್ಟು ಶಿಬಿರಗಳು ನಡೆದರೂ ಜನಸಾಮಾನ್ಯರು ಮಾತ್ರವಲ್ಲದೆ ವೈದ್ಯರೂ ಆರೋಗ್ಯ ಕಾಳಜಿಯಲ್ಲಿ ಹಿಂದುಳಿದಿದ್ದಾರೆ ಎಂದು ತಿಳಿಸಿದರು.
ಶಿಬಿರದಲ್ಲಿ ಚರ್ಮ, ದಂತ ಮತ್ತು ಕೀಲುರೋಗ ಪರೀಕ್ಷೆ, ಸ್ತ್ರೀರೋಗ ಸಮಾಲೋಚನೆ, ರಕ್ತದಾನ, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ, ಕನ್ನಡಕ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ, ಕಿವಿ,ಮೂಗು,ಗಂಟಲು ಪರೀಕ್ಷೆ, ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು.

ಫಾದರ್ ಮುಲ್ಲರ್ ಆಸ್ಪತ್ರೆಯ ಆರೋಗ್ಯ ಕಾರ್ಡ್ ವಿತರಿಸಲಾಯಿತು.
ಬ್ಲೂಲೈನ್ ಸಂಸ್ಥೆಯ ಆಡಳಿತ ನಿರ್ದೇಶಕ ಮಹಮ್ಮದ್ ಶೌಕತ್ ಶೌರಿ ಅಧ್ಯಕ್ಷತೆ ವಹಿಸಿದ್ದರು. ಅರೆಬಿಯನ್ ಸೀ ಫಿಶರೀಸ್ ಮೆನೇಜ್ಮೆಂಟ್ ಕೋಆರ್ಡಿನೇಷನ್ ಕಮಿಟಿಯ ಆಡಳಿತ ನಿರ್ದೇಶಕ ಡಾ.ಶಿವಕುಮಾರ್ ಮಗದ, ನಿರ್ದೇಶಕ ರಮೇಶ್ ಎಂ.ಆರ್., ಫಾದರ್ ಮುಲ್ಲರ್ ಆಸ್ಪತ್ರೆಯ ಡಾ.ಮಿಷಲ್ ಫರ್ನಾಂಡೀಸ್, ನಡುಪದವು ಮಸೀದಿಯ ಅಧ್ಯಕ್ಷ ಎನ್.ಎಸ್. ನಾಸಿರ್ ನಡುಪದವು, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ನಿರ್ದೇಶಕ ಮಹಮ್ಮದ್ ಫಕೀರ್ ಹುಸೈನ್ ಮೊದಲಾದವರು ಉಪಸ್ಥಿತರಿದ್ದರು.

ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಹೈದರ್ ಕೈರಂಗಳ ಕಾರ್ಯಕ್ರಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೀನುಗಾರಿಕಾ ಕಾಲೇಜಿನ ಶೀತಲ್ ವಂದಿಸಿದರು. ಬಬಿತಾ ಕಾರ್ಯಕ್ರಮ ನಿರೂಪಿಸಿದರು.

‘ಜೀವನ ಎನ್ನುವುದು ಸಣ್ಣದೊಂದು ಪ್ರಯಾಣ, ಹುಟ್ಟು ಸಾವಿನ ಸಾವಿನ ನಡುವೆ ನಾವು ಮಾಡುವ ಸೇವೆ ದೇವರು ಮೆಚ್ಚುವಂತಿರಬೇಕೇ ಹೊರತು ಹೆಸರು ಗಳಿಸಲು ಆಗಿರಬಾರದು. ಕಾಯಿಲೆ ಬಗ್ಗೆ ಹೇಳುವಾಗ ಭಯ ಆಗುತ್ತದೆ, ಈ ನಿಟ್ಟಿನಲ್ಲಿ ಜನಸಾಮಾನ್ಯರಿಗಾಗಿ ಶಿಬಿರ ನಡೆಸಲಾಗಿದೆ’
ಮಹಮ್ಮದ್ ಶೌಕತ್ ಶೌರಿ, ಆಡಳಿತ ನಿರ್ದೇಶಕ, ಬ್ಲೂಲೈನ್ ಫಿಶರೀಸ್ ಸಂಸ್ಥೆ


