ವಿಟ್ಲ: ಸರ್ಕಾರಿ ಶಾಲಾ ಆವರಣದಲ್ಲಿದ್ದ ಬೆಲೆಬಾಳುವ ಎರಡು ಹಲಸು ಜಾತಿಯ ಮರಗಳನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮತ್ತಿತರರೇ ಅಕ್ರಮವಾಗಿ ಕಡಿದು ಮಾರಾಟ ಮಾಡಿದ ಆಘಾತಕಾರಿ ಪ್ರಕರಣವೊಂದು ಬಯಲಾಗಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಡುಮಠ. ಇಲ್ಲಿನ ಶಾಲಾ ಮೈದಾನದ ಬದಿಯಲ್ಲಿ ಸುಮಾರು ಎಂಭತ್ತು ವರ್ಷಗಳಿಂದ ನೆರಳು ನೀಡುತ್ತಿದ್ದ ಹಲಸು ಜಾತಿಯ ಎರಡು ಮರಗಳು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತಾತನ ಪಟಾಲಂನ ರಾಕ್ಷಸೀ ಕೃತ್ಯಕ್ಕೆ ಬಲಿಯಾಗಿದೆ.

ಸರ್ಕಾರದ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ನೆಪದಲ್ಲಿ ಎರಡು ಅಮಾಯಕ ಮರಗಳನ್ನು ನಾಶ ಮಾಡಿರುವುದು ವಿದ್ಯಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರಿಫ್ ಕರಾಯಿ ಮತ್ತಾತನ ಬೆಂಬಲಿಗರು ಎರಡು ಮರಗಳನ್ನು ಕಡಿಸಿ ಸಮಿತಿಯ ಸದಸ್ಯನೇ ಆಗಿರುವ ಸಾಲೆತ್ತೂರು ಹಮೀದ್ ಎಂಬವಾತಗೆ ಮಾರಾಟ ಮಾಡಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ.

ಅಕ್ರಮವಾಗಿ ಕಡಿದ ಮರಗಳನ್ನು ಮಿನಿ ಲಾರಿಯಲ್ಲಿ ಸಾಗಾಟ ಮಾಡಿದ ಫೊಟೋ ಗಳು ಇದೀಗ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ.ಸಮಿತಿಯ ಇತರ ಸದಸ್ಯರು ಮತ್ತು ಹಳೆ ವಿದ್ಯಾರ್ಥಿಗಳು ನೆರಳು ನೀಡುತ್ತಿದ್ದ ಹಳೆಯ ಮರಗಳನ್ನು ತೆರವು ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಅಧ್ಯಕ್ಷ ಮತ್ತು ಆತನ ಹಿಂಬಾಲಕರು, ಮುಖ್ಯ ಶಿಕ್ಷಕಿ ತಮ್ಮ ಅಕ್ರಮ ಮುಂದುವರಿಸಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ.

ನೆರಳು ನೀಡುತ್ತಿದ್ದ ಬೆಲೆಬಾಳುವ ಮರಗಳನ್ನು ಅಕ್ರಮವಾಗಿ ತೆರವು ಮಾಡುವ ಮೂಲಕ ತುಘಲಕ್ ದರ್ಬಾರ್ ನಡೆಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಮಾಹಿತಿ ತಿಳಿದಿದ್ದರೂ ಅಕ್ರಮಕ್ಕೆ ಕಣ್ಮುಚ್ಚಿ ಕುಳಿತ ಶಾಲಾ ಮುಖ್ಯ ಶಿಕ್ಷಕಿ, ಸಿ.ಆರ್.ಪಿ.ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಬಂಟ್ವಾಳ ವಲಯ ಅರಣ್ಯಾಧಿಕಾರಿಗಳಿಗೆ ಸಮಿತಿ ಸದಸ್ಯ ಇಕ್ಬಾಲ್ ಮತ್ತಿತರರು ದೂರು ನೀಡಿದ್ದಾರೆ.ದೂರಿಗೆ ಸಂಬಂಧಿಸಿದಂತೆ ಸೋಮವಾರ ಸಂಜೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.



