ಬೆಳ್ತಂಗಡಿ: ಸದ್ಭಾವನಾ ವೇದಿಕೆ ಅಳದಂಗಡಿ ಇದರ ವತಿಯಿಂದ ಅಳದಂಗಡಿ ಸೈಂಟ್ ಪೀಟರ್ ಕ್ಲೇವರ್ ಧರ್ಮ ಕೇಂದ್ರದ ಸಹಕಾರದಲ್ಲಿ ಸೌಹಾರ್ದ ಕ್ರಿಸ್ಮಸ್ ಸಂಭ್ರಮ, ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ,
ನಮ್ಮ ಪರಿಸರದಲ್ಲಿ ಫಲ್ಗುಣಿ ನದಿ ಹರಿಯುತ್ತದೆ, ಬೆಳ್ತಂಗಡಿಯಲ್ಲಿ ನೇತ್ರಾವತಿ ನದಿ ಹರಿಯುತ್ತದೆ, ಹಾಗೆ ಅಳದಂಗಡಿಯಲ್ಲಿ
ಮೃತ್ಯುಂಜಯ ನದಿ ಹರಿಯುತ್ತದೆ, ಈ ಎಲ್ಲಾ ನದಿಗಳು ಸೇರುವುದು ಅರಬ್ಬಿ ಸಮುದ್ರವನ್ನು, ನಾವು ಹುಟ್ಟಿನಿಂದ
ಬೇರೆ ಬೇರೆ ಧರ್ಮದಲ್ಲಿ ಬಂದಿರಬಹುದು, ಆದರೆ ಎಲ್ಲಾ ಧರ್ಮದ ಭೋದಕರೂ ಸಾರಿದ ಸಂದೇಶ ಒಂದೇ, ನಾವು ಪರಸ್ಪರ ಸೌಹಾರ್ದದಿಂದ ಸದ್ಭಾವನೆಯಿಂದ ಇರಬೇಕು, ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಎಲ್ಲಾ ಧರ್ಮದ ಸಾರಾಂಶ ಒಂದೇ, ಇತರರಿಗೆ ಒಳಿತು ಉಪಾಕಾರ ಮಾಡಿದರೆ ಅದು ನಿಮಗೂ ಲಭಸುತ್ತದೆ, ನಾವು ಬೇರೆ ಬೇರೆ ಧರ್ಮದ ಸಾರವನ್ನು ಅರಿತಾಗ, ಆಯಾಯ ಧರ್ಮದವರನ್ನು ನಮ್ಮಂತೆ ಸ್ವೀಕರಿಸಲು ಸಾಧ್ಯ ಆಗುತ್ತದೆ, ಎಂದು ಸೈಂಟ್ ಪೀಟರ್ ಕ್ಲೇವರ್ ಧರ್ಮಕೇಂದ್ರದ ಪ್ರಧಾನ ಧರ್ಮಗುರುಗಳು ವಂದನೀಯ ಫಾದರ್ ಎಲ್ಯಾಸ್ ಡಿಸೋಜಾ ಸೌಹಾರ್ದಾ ಕ್ರಿಸ್ಮಸ್ ಸಂದೇಶ ನೀಡಿದರು.
ಎಲ್ಲಾ ಧರ್ಮಗಳಿಗೂ ಹಬ್ಬಗಳಿಗೂ ಅದರದ್ದೆ ಆದ ಮಹತ್ವ ಇದೆ, ಆರಾಧನಾ ಕ್ರಮ ಇದೆ, ಅದನ್ನು ಆಯಾಯ ಧರ್ಮದವರು ನಿಷ್ಠೆಯಿಂದ ಆಚರಿಸುವಾಗ, ಇತರರನ್ನು ಜೊತೆಗೂಡಿಸಿ ಹಬ್ಬದ ಸಂತೋಷವನ್ನು ಆಚರಿಸುವಂತಾಗಲಿ ಇತರರಿಗೂ ಹಬ್ಬದ ಸಂತೋಷವನ್ನು ಹಂಚಲಿ, ಎಂದು ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರು ಇಸಾಕ್ ಪುತ್ತೂರು ಸಿಎ ಸೌಹಾರ್ದ ಸಂದೇಶ ನೀಡಿದರು.
ನಾವು ಬದುಕಿ ಇತರರಿಗೂ ಬದುಕಲು ಅವಕಾಶ ಮಾಡಿಕೊಡುವುದೆ ಧರ್ಮ, ನಮ್ಮ ಹಬ್ಬಗಳು ಇತರರಿಗೂ
ಹಬ್ಬಗಳಾಗುವ ಹಾಗೆ ಆಗಲಿ, ಎಲ್ಲಾ ಧರ್ಮದ ಸಾರ ಒಂದೇ, ಪರಸ್ಪರ ಗೌರವದಿಂದ ಬದುಕುವುದೇ ಧರ್ಮದ ಸಾರ,
ಎಂದು ರಾಜ್ಯಮಟ್ಟದ ಪಂಚಾಯತ್ ರಾಜ್ ತರಬೇತುದಾರರು ಚಂದ್ರಶೇಖರ್ ಪಿ. ಕೆ. ಸೌಹಾರ್ದ ಸಂದೇಶ ನೀಡಿದರು.
ಪ್ರಗತಿಪರ ಕೃಷಿಕರು ಅಳದಂಗಡಿ ಸದ್ಭಾವನ ವೇದಿಕೆ ಅಧ್ಯಕ್ಷರು ಸುಭಾಸ್ಚಂದ್ರ ರೈ ಅಧ್ಯಕ್ಷತೆ ವಹಿಸಿ, ನಾವು ನಮ್ಮ ಮಕ್ಕಳಿಗೆ ತಪ್ಪು ಸಂದೇಶ, ತಪ್ಪು ಭಾವನೆಗಳನ್ನು ಕಲಿಸಿದಾಗ ಇಂತಹ ಅನಾಹುತಗಳು ಆಗಲು ಸಾಧ್ಯ, ಸೌಹಾರ್ದತೆ ಮೊದಲೂ ಇತ್ತು, ಈಗಲೂ ಇದೆ ಅದನ್ನು ಮೊದಲು ನಮ್ಮ ಮಕ್ಕಳಿಗೆ ಕಲಿಸಬೇಕು ಎಂದು ತಿಳಿಸಿದರು. ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆಗೈದರು.
ಅಳದಂಗಡಿ ಸದ್ಭಾವನಾ ವೇದಿಕೆ ಉಪಾಧ್ಯಕ್ಷ ಸಿಪ್ರಿಯನ್ ಫರ್ನಾಂಡಿಸ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಿಕ್ಷಕಿ ಜ್ಯೋತಿ ಮೊಂತೋರೊ ನಿರೂಪಿಸಿದರು. ಸದ್ಭಾವನಾ ವೇದಿಕೆ ಕೋಶಾಧಿಕಾರಿ ವಿಕ್ಟರ್ ಕ್ರಾಸ್ತಾ ವಂದಿಸಿದರು.


