ಕಲ್ಲಬೆಟ್ಟಿನಲ್ಲಿ ನೂತನ ಶೈಕ್ಷಣಿಕ ಕಟ್ಟಡ ಲೋಕಾಪ೯ಣೆ
ಮೂಡುಬಿದಿರೆ : 7ರಂದು ಆಂಧ್ರ ಪ್ರದೇಶದ ರಾಜ್ಯಪಾಲ, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ಅವರು ಮೂಡುಬಿದಿರೆಗೆ ಆಗಮಿಸಿ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕ್ಯಾಂಪಸ್ನಲ್ಲಿ ನೂತನವಾಗಿ ನಿಮಿ೯ಸಿರುವ ಶೈಕ್ಷಣಿಕ ಕಟ್ಟಡವನ್ನು ಸಂಜೆ 3.30ಕ್ಕೆ ಲೋಕಾಪ೯ಣೆ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಸಜ್ಜಿತ ಅತ್ಯಾಧುನಿಕ ಕಟ್ಟಡಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಬೃಹತ್ ಕಟ್ಟಡವು ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, 52 ವಿಶಾಲ ಕೊಠಡಿಗಳು, ಡಬಲ್ ಕ್ಲಾಸ್ ರೂಮ್ಗಳು ಮತ್ತು ಟೆಕ್ನೋ ತರಗತಿಗಳು, ನೈಸರ್ಗಿಕ ಗಾಳಿ-ಬೆಳಕಿಗೆ ಒತ್ತು ನೀಡಿದ ಸುಂದರ ಮತ್ತು ಆಕರ್ಷಕ ವಾಸ್ತುವಿನ್ಯಾಸ. ಈ ನೂತನ ಕಟ್ಟಡವು ಸಂಸ್ಥೆಯು ಪ್ರಜ್ಞಾವಂತ ನಾಗರಿಕರನ್ನು ಸೃಷ್ಟಿಸುವ ಕನಸಿನೆಡೆಗಿನ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದೆ
.ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಗೌರವಾಧ್ಯಕ್ಷ ಕೆ. ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸುವರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿರುವರು ಎಂದರು. ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತ ನಿರ್ದೇಶಕ ಡಾ.ಸಂಪತ್ ಕುಮಾರ್, ಪಿ.ಆರ್.ಒ ಸ್ವರೂಪ್ ಜೈನ್, ಮಾಹಿತಿ ಅಧಿಕಾರಿ ವಿಜಯ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


