ಮೂಡುಬಿದಿರೆ: ಆಯುರ್ವೇದ ಆಹಾರ ಪದ್ದತಿ ಪ್ರಾಚೀನ ಪರಂಪರೆಯನ್ನು ಹೊಂದಿದೆ. ಅದರಂತೆ ನಮ್ಮ ಜೀವನ ಶೈಲಿಯನ್ನು ಪಾಲಿಸಿಕೊಂಡು ಬಂದರೆ ಅನೇಕ ರೋಗಗಳಿಂದ ದೂರ ಇರಬಹುದು ಎಂದು ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಕಾರ್ಕಳ ಹೇಳಿದರು.

ಕೋಟೆಬಾಗಿಲು ವೀರಮಾರುತಿ ಸಭಾಭವನದಲ್ಲಿ ದ.ಕ ಜಿಲ್ಲಾ ಹೆಗ್ಗಡೆ ಮಹಿಳಾ ಘಟಕ ಕೋಟೆಬಾಗಿಲು ವತಿಯಿಂದ ಸಮಾಜದ ಮಹಿಳೆಯರಿಗೆ ಹಮ್ಮಿಕೊಂಡ ‘ಅಂಗೈಯಲ್ಲಿ ಆರೋಗ್ಯ ಮತ್ತು ಕೌಶಲ್ಯ ಬೆಳವಣಿಗೆ’ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನಿತ್ಯ ಯೋಗ. ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಣ್ಣ, ಪುಟ್ಟ ಕಾಯಿಲೆಗಳಿಗೆ ಮನೆ ಮದ್ದು ಉತ್ತಮ ಔಷಧಿ ಎಂಬುದು ನಮಗೆಲ್ಲಾ ತಿಳಿದಿರಬೇಕು. ಇಂದಿನ ಒತ್ತಡದ ಬದುಕಿನಲ್ಲಿ ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ಜಾಗೃತೆವಹಿಸಬೇಕು ಎಂದರು.
ಇದೇ ವೇಳೆ ಅವರು ಸ್ಥಳದಲ್ಲಿ ಹನುಮಂತ ದೇವರು ಹಾಗೂ ವಿವಿಧ ತರಕಾರಿಗಳ ಚಿತ್ರಗಳನ್ನು ಬಿಡಿಸಿದರು. ವೀರಮಾರುತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ಯಾಮ ಹೆಗ್ಡೆ, ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ, ಲೀಲಾವತಿ ಹೆಗ್ಡೆ ಕಾರ್ಕಳ, ರತ್ನಾವತಿ ಹೆಗ್ಡೆ ನಾರಾವಿ ಉಪಸ್ಥಿತರಿದ್ದರು. ಜಿಲ್ಲಾ ಹೆಗ್ಗಡೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಲತಾ ಯು. ಹೆಗ್ಡೆ ವಂದಿಸಿದರು. ಹೆಗ್ಗಡೆ ಮಹಿಳಾ ಘಟಕ ಮೂಡುಬಿದಿರೆ ವಲಯ ಅಧ್ಯಕ್ಷೆ ಚೇತನಾ ರಾಜೇಂದ್ರ ಹೆಗ್ಡೆ ಕಾಯ೯ಕ್ರಮ ನಿರೂಪಿಸಿದರು


