ಮೂಡುಬಿದಿರೆ: ಅವಿಭಜಿತ ದ. ಕ, ಉಡುಪಿ ಜಿಲ್ಲೆಯಲ್ಲಿ ಮೊದಲಿಗೆ ಖಾಸಗಿ ಬಸ್ಸುಗಳೇ ಸೇವೆಯನ್ನು ಆರಂಭಿಸಿದ್ದು. ಸರ್ಕಾರಿ ಬಸ್ಸುಗಳಿಗೆ ಸರಿಸಮಾನವಾಗಿ ಖಾಸಗಿ ಬಸ್ ಗಳು ಸೇವೆ ನೀಡುತ್ತಿದ್ದು, ಇದೀಗ ಆಧುನಿಕ ತಂತ್ರಜ್ಞಾನದ ಮೂಲಕ ಅಳವಡಿಸಿರುವ ಡಿಜಿಟಲ್ ಬಸ್ ವೇಳಾಪಟ್ಟಿ ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.

ಅವರು ಎಸ್.ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ ಮತ್ತು ಲಯನ್ಸ್ ಕ್ಲಬ್ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಮತ್ತು ಖಾಸಗಿ ಬಸ್ಸು ನಿಲ್ದಾಣದಲ್ಲಿ ಆಳವಡಿಸಲಾಗಿರುವ ಡಿಜಿಟಲ್ ವೇಳಾಪಟ್ಟಿಯನ್ನು ಪಾಲಿಟೆಕ್ನಿಕ್ನ ಆಡಳಿತ ಮಂಡಳಿ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಶಾಸಕನಾಗಿರುವ ವೇಳೆ ಸರ್ಕಾರಿ ಬಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇನೆ. ಮೂಡುಬಿದಿರೆಯಲ್ಲಿ ಸುಸಜ್ಜಿತ ಸರ್ಕಾರಿ ಬಸ್ ನಿಲ್ದಾಣ ಹಾಗೂ ಡಿಪೋ ನಿರ್ಮಾಣಕ್ಕೆ ಪ್ರಯತ್ನಗಳಾಗುತ್ತಿವೆ ಎಂದರು.

ಮಾಲಕರ ಸಂಘದ ವಲಯಾಧ್ಯಕ್ಷ ನಾರಾಯಣ ಪಿ.ಎಂ. ಅವರು ಮಾತನಾಡಿ, ಖಾಸಗಿ ಬಸ್ಗಳು ನಿರಂತರವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅಧುನಿಕ ತಂತ್ರಜ್ಞಾನಗಳಿಂದ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದೇವೆ. ಈ ಡಿಜಿಟಲ್ ವೇಳಾಪಟ್ಟಿ ಬಸ್ ಸಿಬ್ಬಂದಿಗಳಿಗೂ ಪ್ರಯೋಜನವಾಗಲಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಯೋಜನೆಗೆ ಶುಭ ಹಾರೈಸಿದರು.ಎಸ್.ಎನ್ ಮೂಡುಬಿದಿರೆ ಪಾಲಿಟೆಕ್ನಿಕ್ನ ಪ್ರಾಂಶುಪಾಲೆ ನೊರೊನ್ಹ ತರೀನಾ ರೀಟಾ, ಪುರಸಭೆ ಸದಸ್ಯ, ಲಯನ್ಸ್ ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಪರಿಸರ ಅಭಿಯಂತರೆ ಶಿಲ್ಪಾ ಎಸ್., ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಉಪನ್ಯಾಸಕರಾದ ಪ್ರದೀಪ್ ಸಿ. ಎಸ್., ಶ್ರೀ ಹರ್ಷ, ಗೋಪಾಲಕೃಷ್ಣ ಕೆ.ಎಸ್., ಹಿರಿಯ ಲಯನ್ಸ್ ಸದಸ್ಯ ಕೆ. ಶ್ರೀಪತಿ ಭಟ್, ತಿಮ್ಮಯ್ಯ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ತ, ಸದಸ್ಯರಾದ ಆಲ್ವಿನ್ ಮಿನೇಜಸ್, ಮುನ್ನಾರಾವ್, ಎಂ.ಕೆ. ದಿನೇಶ್, ವಿನೋದ್ ಡೇಸಾ, ಸಿರಿಲ್, ಬಸ್ ಏಜೆಂಟರಾದ ಸಂತೋಷ್ ಶೆಟ್ಟಿ, ಶಶಿಧರ ಮತ್ತಿತರರು ಉಪಸ್ಥಿತರಿದ್ದರು. ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.


