ಉಳ್ಳಾಲ(ನ-01): ಪತ್ರಕರ್ತ ಮನೋಹರ್ ಪ್ರಸಾದ್ ಅವರೇ ನನ್ನ ಮಾಧ್ಯಮ ವೃತ್ತಿ ಜೀವನಕ್ಕೆ ಪ್ರೇರಣೆಯಾಗಿದ್ದರು.ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ರಾಜಕೀಯ ನಾಯಕರು,ಸಿನೆಮಾ ಸೆಲೆಬ್ರಿಟಿಗಳು,ಕ್ರೀಡಾಪಟುಗಳ ಬಗೆಗಿನ ವರದಿಗಳನ್ನು ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಸಾಮಾಜಿಕ ಮಾಧ್ಯಮಗಳನ್ನೂ ಅವರು ಸಮರ್ಪಕವಾಗಿ ಬಳಸಿ ಹೊಸ ತಲೆಮಾರಿಗೆ ಮಾರ್ಗದರ್ಶನ ನೀಡಿದ್ದಾರೆ.ಅವರು ಮಾಡಿರುವ ಸಾಧನೆಗಳು ಮತ್ತು ಮಾಧ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ನಮ್ಮೆಲ್ಲರಿಗೂ ಆದರ್ಶವಾಗಿವೆ ಎಂದು ಖ್ಯಾತ ಜಾನಪದ ಸಂಸ್ಕೃತಿ ಚಿಂತಕರಾದ ಕದ್ರಿ ನವನೀತ್ ಶೆಟ್ಟಿ ಹೇಳಿದರು.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಕುತ್ತಾರಿನ ಖಾಸಗಿ ಸಭಾಂಗಣದಲ್ಲಿ ಶನಿವಾರದಂದು ನಡೆದ ಕನ್ನಡ ರಾಜ್ಯೋತ್ಸವ ಮತ್ತು ಅಗಲಿದ ಹಿರಿಯ ಪತ್ರಕರ್ತರಾದ ದಿ.ಮನೋಹರ ಪ್ರಸಾದ್ ಸಂಸ್ಮರಣೆ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ವೇಳೆ ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ,ವಿದ್ಯಾಧರ ಶೆಟ್ಟಿ,ಛಾಯಾಗ್ರಾಹಕ ಅಶೋಕ್ ಉಳ್ಳಾಲ್ ಮತ್ತು ಏಷಿಯನ್ ಕ್ಲಾಸಿಕ್ ಆಂಡ್ ಎಕ್ವಿಪ್ಡ್ ಬೆಂಚ್ ಚಾಂಪಿಯನ್ಶಿಪ್ 2025 ರಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕವನ್ನು ಗಳಿಸಿದ ಉಳ್ಳಾಲ ನಗರಸಭೆಯ ಸದಸ್ಯೆ ಗೀತಾ ಬಾಯಿ ಅವರನ್ನ ಸನ್ಮಾನಿಸಲಾಯಿತು.
ಮಾಜಿ ಶಾಸಕರಾದ ಕೆ.ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪಿ.ಬಿ. ಹರೀಶ್ ರೈ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾದ ವಸಂತ್ ಎನ್.ಕೊಣಾಜೆ,ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಉಳ್ಳಾಲ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ರಾಜೇಶ್ ಉಳ್ಳಾಲ್,ಮಾಜಿ ಅಧ್ಯಕ್ಷ ಚಿದಾನಂದ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗೌರವ ಉಪಾಧ್ಯಕ್ಷರಾದ ಸದಾನಂದ ಬಂಗೇರ,ಉಪಾಧ್ಯಕ್ಷರಾದ ಯು.ಪಿ.ಆಲಿಯಬ್ಬ,ಪ್ರಮುಖರಾದ ವಾಣಿ ಲೋಕಯ್ಯ,ಶಶಿಕಾಂತಿ ಉಳ್ಳಾಲ್,ವಾಣಿ ಗೌಡ ಉಳ್ಳಾಲ ಬೈಲ್,ರಾಘವ ಮಾಸ್ಟರ್,ರತ್ನಾವತಿ.ಜೆ ಬೈಕಾಡಿ,ಅನುಪಮ.ಸಿ ಬಬ್ಬುಕಟ್ಟೆ ,ನಾಗರತ್ನ,ಲತಾ,ಸತೀಶ್ ಭಂಡಾರಿ,ಸರೋಜ,ಜಯಶ್ರೀ ಕೆ, ಶಶಿಕಲಾ ಗಟ್ಟಿ ,ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.
ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷರಾದ ದಿನಕರ ಉಳ್ಳಾಲ್ ಸ್ವಾಗತಿಸಿದರು.ಮಾಧವಿ ಉಳ್ಳಾಲ್ ಸನ್ಮಾನಿತರನ್ನ ಪರಿಚಯಿಸಿದರು.ಧನಲಕ್ಷ್ಮಿ ಗಟ್ಟಿ ಮತ್ತು ಕೆ.ಕೆ.ಮಂಜನಾಡಿ ನಿರೂಪಿಸಿದರು.ಸ್ವಪ್ನ ಶೆಟ್ಟಿ ವಂದಿಸಿದರು.
ಮನೋಹರ್ ಪ್ರಸಾದ್ ಅವರು ಸಾಮಾನ್ಯ ಓದುಗರಿಗೂ ಅರ್ಥೈಸುವ ರೀತಿಯಲ್ಲಿ ವರದಿಕಾರಿಕೆ ಮಾಡುತ್ತಿದ್ದರು.ಕವಿ,ನಿರೂಪಕ,ನಟರಾಗಿದ್ದ ಅವರು ಬಹುಮುಖ ಪ್ರತಿಭೆಯಾಗಿದ್ದರು.ಪತ್ರಕರ್ತನಿಗೆ ಸಾರ್ವಜನಿಕ ಸಂಪರ್ಕ ಇದ್ದಷ್ಟು ಮಾಹಿತಿ,ಸುದ್ದಿಮೂಲಗಳು ಸಿಗುತ್ತವೆ.ಅತೀ ಹೆಚ್ಚಿನ ಜನರ ಸಂಪರ್ಕದಲ್ಲಿದ್ದ ಅವರು ಮಾಹಿತಿದಾರರ ಕಷ್ಟ ,ಕಾರ್ಪಣ್ಯಗಳಿಗೂ ಸ್ಫಂದಿಸುವ ಮನೋಭಾವ ಹೊಂದಿದ್ದರು.ಇನ್ನೊಬ್ಬರಿಗೆ ನೋವಾಗದಂತೆ ತನ್ನನ್ನೇ ಹಾಸ್ಯದ ವಸ್ತುವನ್ನಾಗಿ ಬಿಂಬಿಸಿ ಸಭಿಕರನ್ನ ನಗಿಸುತ್ತಿದ್ದರು.-ಆನಂದ ಶೆಟ್ಟಿ,ಹಿರಿಯ ಪತ್ರಕರ್ತರು.


