ಮೂಡುಬಿದಿರೆ:ಯುಕೆಟಿಎಲ್ 400ಕೆವಿ ವಿದ್ಯುತ್ ಪ್ರಸರಣ ಕಂಪೆನಿಯ ದೌರ್ಜನ್ಯದ ವಿರುದ್ಧ ಇಷ್ಟರವರೆಗೆ ಶಾಂತಿಯುತವಾದ ಪ್ರತಿಭಟನೆಯನ್ನು ಮಾಡಿದ್ದೇವೆ. ಆದರೆ ಅದಕ್ಕೆ ಆಡಳಿತ ವ್ಯವಸ್ಥೆಯು ಸಕಾರತ್ಮಕವಾಗಿ ಸ್ಪಂದಿಸಿಲ್ಲ. ಇನ್ನು ಮುಂದೆ ಹೋರಾಟದ ಸ್ವರೂಪ ತೀವ್ರವಾಗಲಿದ್ದು, ಶೀಘ್ರದಲ್ಲೇ ಮೂಡುಬಿದಿರೆಯಲ್ಲಿ 10 ಸಾವಿರದಷ್ಟು ಮಂದಿಯನ್ನು ಸೇರಿಸಿ ಉಗ್ರಹೋರಾಟವನ್ನು ಮಾಡಲಿದ್ದೇವೆ ಕಿಸಾನ್ ಮುಖಂಡ ಶಾಂತಿ ಪ್ರಸಾದ್ ಹೆಗ್ಡೆ ಎಚ್ಚರಿಸಿದರು.

ಅವರು ಕಂಪನಿಯು ಯಾವುದೇ ಪರಿಹಾರ ನೀಡದೆ ರೈತರ ಅಡಿಕೆ ಮತ್ತು ತೆಂಗಿನ ತೋಟಗಳನ್ನು ನಾಶಪಡಿಸುತ್ತಿರುವುದನ್ನು ಹಾಗೂ ಸುಳ್ಳು ಕೇಸ್ಗಳ ಬೆದರಿಕೆ ಹಾಕುತ್ತಿರುವುದನ್ನು ವಿರೋಧಿಸಿ ಭಾರತೀಯ ಕಿಸಾನ್ ಸಂಘದ ಮೂಡುಬಿದಿರೆ ತಾಲೂಕು ಘಟಕ ಮತ್ತು ಕಲ್ಲಮುಂಡ್ಕೂರು-ನಿಡ್ಡೋಡಿ ಗ್ರಾಮ ಸಮಿತಿಯ ರೈತರು ಸೋಮವಾರ ಹಮ್ಮಿಕೊಂಡ ರೈತ ಸ್ವಾಭಿಮಾನಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
ಕಂಪೆನಿ ಹಾದು ಹೋಗುವ ಪ್ರದೇಶಗಳ ಸಂತ್ರಸ್ತ ರೈತರು ಮಾತ್ರವಲ್ಲ, ವಿವಿಧ ಭಾಗದ ರೈತರು ನಮಗೆ ಬೆಂಬಲ ಸೂಚಿಸಿದ್ದಾರೆ. ಪ್ರತಿ ಗ್ರಾಮಗಳ ಗ್ರಾಮಸ್ಥರು ನಮ್ಮೊಂದಿಗೆ ಕೈಜೋಡಿಸಬೇಕು. ಹೋರಾಟಕ್ಕೆ ಬಲ ಬಂದಷ್ಟು ನಮ್ಮ ರೈತರಿಗೆ ಆಗುವ ದೌರ್ಜನ್ಯವನ್ನು ಹಿಮ್ಮೆಟಿಸಲು ಸಾಧ್ಯ ಎಂದು ಹೇಳಿದರು.

ನಿಡೋಡಿ ಚಚ್೯ನಿಂದ ಇಂದಿರಾ ನಗರ ಕಾಲೋನಿವರೆಗೆ ನಡೆದ ಜಾಥಕ್ಕೆ ನಿಡ್ಡೋಡಿ ಚರ್ಚ್ ಧರ್ಮಗುರು ರೆ.ಫಾ ಡೆನಿಸ್ ಸುವಾರಿಸ್ ಚಾಲನೆ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕಲ್ಲಮುಂಡ್ಕೂರು ದೈಲಬೆಟ್ಟು ಕ್ಷೇತ್ರ ಅರ್ಚಕ ಶ್ರೀಧರ್ ಭಟ್ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಹೋರಾಟದ ಪ್ರಮುಖರಾದ ಅಲ್ಫೋನ್ಸ್ ಡಿಸೋಜ, ಚಂದ್ರಹಾಸ ಶೆಟ್ಟಿ ಇನ್ನಾ, ಜಾಯ್ಲಸ್ ತಾಕೋಡೆ, ಲಾಯ್ಡ್ ಡಿಸೋಜ, ವಸಂತ್ ಭಟ್, ಕಲ್ಲಮುಂಡ್ಕೂರು ಗ್ರಾಪಂ ಅಧ್ಯಕ್ಷೆ ಪ್ರೇಮಾ ಶೆಟ್ಟಿ, ಮಾಜಿ ಅಧ್ಯಕ್ಷರಾದ ಕೇಶವ, ಜೋಕಿಂ ಕೊರೆಯಾ, ,ಸದಸ್ಯರು, ರೈತ ಮುಖಂಡರು, ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.


