ಕಾಸರಗೋಡು : ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ನೇತೃತ್ವದಲ್ಲಿ ಇತ್ತೀಚಿಗೆ ಮಂಗಳೂರಿನಲ್ಲಿ ಜರಗಿದ ಅಖಿಲ ಭಾರತ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಸಹೋದರ, ಸಹೋದರಿಗೆ ಬಹುಮಾನದ ಮೆರಗು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಕುಂಬಳೆ ಸೂರಂಬೈಲುವಿನ ಕುಳ ನಿವಾಸಿ ಶ್ವೇತಾ ಹೊಳ್ಳ ಅವರು 17 ವರ್ಷದೊಳಗಿನವರ ಕುಮಿಟೆ ಬ್ರೌನ್ ಬೆಲ್ಟ್ ವಿಭಾಗದಲ್ಲಿ ದ್ವಿತೀಯ ಹಾಗೂ ಕಟ ವಿಭಾಗದಲ್ಲಿ ತೃತೀಯ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಈಕೆಯ ಸಹೋದರ ತೇಜಸ್ ಹೊಳ್ಳ 12 ವರ್ಷದೊಳಗಿನ ವಿಭಾಗ ಕಟದಲ್ಲಿ ಭಾಗವಹಿಸಿ ತೃತೀಯ ಕಂಚಿನ ಪದಕ ಬಹುಮಾನವನ್ನು ಮುಡಿಗೇರಿಸಿದ್ದಾನೆ. ಎರಡು ಸಾವಿರಕ್ಕೂ ಅಧಿಕ ಮಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಶ್ವೇತಾ ಹೊಳ್ಳ ಅವರು ಕುಂಬಳೆ ಸರಕಾರಿ ಉನ್ನತ ಪ್ರೌಢ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿನಿ ಹಾಗೂ ತೇಜಸ್ ಹೊಳ್ಳ ಬೇಳ ಸಂತ ಬಾರ್ತಲೋಮಿಯಸ್ ಎ.ಎಸ್.ಬಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದು, ಕುಳ ನಿವಾಸಿ, ಎಡನಾಡು ಸಹಕಾರಿ ಕ್ಷೀರೋತ್ಪಾದಕ ಸಹಕಾರಿ ಸಂಘದ ನೌಕರ, ಹವ್ಯಾಸಿ ಯಕ್ಷಗಾನ ಕಲಾವಿದ ರಾಮಚಂದ್ರ ಹೊಳ್ಳ – ಶೈಲಜಾ ದಂಪತಿಯ ಮಕ್ಕಳಾಗಿದ್ದಾರೆ. ಕರಾಟೆ ಶಿಕ್ಷಕ ಹರಿವೆಂಕಟೇಶ ಶರ್ಮ ಅವರಿಂದ ಕರಾಟೆ ಅಭ್ಯಸಿಸುತ್ತಿದ್ದಾರೆ.


