ಮೂಡುಬಿದಿರೆ: ಮಾಂಟ್ರಾಡಿಯಲ್ಲಿ ಗುರುವಾರ ನಸುಕಿನ ಜಾವ ಕಾರಿನಲ್ಲಿ ಬಂದ ಅಪರಿಚಿತರು ರಿಕ್ಷಾವನ್ನು ಅಡ್ಡಗಟ್ಟಿ ಹಣ್ಣಿನ ವ್ಯಾಪಾರಿ ಬಳಿಯಿದ್ದ ರೂ 19 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಈದು ಗ್ರಾಮದ ಮಹಮ್ಮದ್ ಹಣ ಕಳಕೊಂಡವರು. ಮೂಡುಬಿದಿರೆ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ವ್ಯಾಪಾರಿಯಾಗಿರುವ ಮಹಮ್ಮದ್ ಮಂಗಳೂರಿನಿಂದ ಹಣ್ಣು ಖರೀದಿಸಲು ಗುರುವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಈದುನಿಂದ ರಿಕ್ಷಾದಲ್ಲಿ ಹೊರಟಿದ್ದರು. ಮಾಂಟ್ರಾಡಿ ತಲುಪಿದಾಗ ಕಾರಿನಲ್ಲಿ ಬಂದ ಅಪರಿಚಿತರ ತಂಡ ಇವರ ರಿಕ್ಷಾವನ್ನು ಅಡ್ಡಗಟ್ಟಿ, ಬೆದರಿಸಿ ರೂ 19 ಸಾವಿರ ನಗದು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


