
ಉಳ್ಳಾಲ: ಬಡಕುಟುಂಬಗಳಿಗೆ ಮನೆ ನಿರ್ಮಾಣ, ದುರಸ್ತಿ ಮಾತ್ರವಲ್ಲದೆ ಆರ್ಥಿಕವಾಗಿ ನೊಂದ ಕುಟುಂಬಗಳಿಗೆ ಆಹಾರ ಹಾಗೂ ದಿನಬಳಕೆಯ ಸಾಮಗ್ರಿಗಳನ್ನು ನೀಡುತ್ತಾ ಬರುವ ಮೂಲಕ ಸಂಘಟನೆ ನೊಂದವರ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಇಂತಹ ಕಾರ್ಯಕ್ಕೆ ಸದಾ ದೇವನ ಸಹಾಯ ಇರುತ್ತದೆ ಎಂದು ಪಾನೀರ್ ಚರ್ಚ್ ಧರ್ಮಗುರು ಚರ್ಚ್ ಧರ್ಮಗುರು ಫಾದರ್ ವಿಕ್ಟರ್ ಡಿ ಮೆಲ್ಲೋ ಅಭಿಪ್ರಾಯಪಟ್ಟರು.

ಪಾನೀರ್ ಮೆರ್ಸಿಯಮ್ಮನವರ ಇಗರ್ಜಿ ಆಶ್ರಯದಲ್ಲಿ ಸಂತ ವಿಶೆಂತ್ ಪಾವ್ಲ್ ಸಭಾದ 26ನೇ ವಾರ್ಷಿಕೋತ್ಸವ ಪ್ರಯುಕ್ತ ಭಾನುವಾರ ಚರ್ಚ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚರ್ಚ್ ಅಧೀನದಲ್ಲಿರುವ ಎಲ್ಲ ಸಂಘಟನೆಗಳು ಸದಾ ಸೇವೆಯಲ್ಲಿ ಸಂತ ವಿಶೆಂತ್ ಪಾವ್ಲ್ ಸಭಾ ಸೇವಾ ಕಾರ್ಯದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿದೆ. ಪ್ರತಿಯೊಬ್ಬರು ತಮ್ಮಿಂದಾಗುವ ಸಹಾಯ ನೀಡಬೇಕು, ಯುವಕರು ಸಂಘಟನೆಗಳಲ್ಲಿ ಸಕ್ರಿಯವಾಗಬೇಕು ಎಂದು ತಿಳಿಸಿದರು.
ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಗ್ರೆಟ್ಟಾ ಡಿಕುನ್ನ, ಸಂತ ವಿಶೆಂತ್ ಪಾವ್ಲ್ ಸಭಾದ ಉಪಾಧ್ಯಕ್ಷ ವಿನ್ನಿ ಕುಟಿನ್ನಾಃ, ಕೋಶಾಧಿಕಾರಿ ಎಲಿಯಾಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
ಸಂತ ವಿಶೆಂತ್ ಪಾವ್ಲ್ ಸಭಾ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ ಸ್ವಾಗತಿಸಿದರು. ಕಾರ್ಯದರ್ಶಿ ಫ್ಯಾಟ್ರಿಕ್ ಡಿಸೋಜ ವರದಿ ವಾಚಿಸಿದರು. ಉಪಾಧ್ಯಕ್ಷ ಆಲ್ಫಾನ್ಸೋ ಫೆರಾವೊ ವಂದಿಸಿದರು.
ಯುವಘಟಕದ ಅಧ್ಯಕ್ಷ ದೀಪಕ್ ರೋಡ್ರಿಗಸ್ ಕಾರ್ಯಕ್ರಮ ನಿರ್ವಹಿಸಿದರು.


