ಮಗಳ ಶಾಲಾ ವಾರ್ಷಿಕೋತ್ಸವದಂದೇ ಘಟನೆ.ನರ ದೌರ್ಬಲ್ಯದಿಂದ ನೊಂದು ಸಾವಿಗೆ ಶರಣಾಗಿರುವ ಶಂಕೆ.
ಉಳ್ಳಾಲ:ಡಿ.20: ನರಿಂಗಾನ ಗ್ರಾಮದ ಕಲ್ಲರಕೋಡಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಭಾಕರ್ ಜೋಗಿ(51) ಎಂಬವರು ಕೋಟೆಕಾರು ಪಟ್ಟಣ ವ್ಯಾಪ್ತಿಯ ಕೊಂಡಾಣದ ತನ್ನ ಮನೆ ಆವರಣದ ಬಾವಿಯಲ್ಲಿ ಶುಕ್ರವಾರ ಸಂಜೆ ಶವವಾಗಿ ಪತ್ತೆಯಾಗಿದ್ದು,ಅನಾರೋಗ್ಯದಿಂದ ಆತ್ಮಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ.

ನಿನ್ನೆ ಸಂಜೆ ಪ್ರಭಾಕರ್ ಅವರು ತನ್ನ ಮಗಳನ್ನ ಉಚ್ಚಿಲದ ಶಾಲೆಗೆ ಶಾಲಾ ವಾರ್ಷಿಕೋತ್ಸವಕ್ಕೆಂದು ಬಿಟ್ಟು ಮನೆಗೆ ಬಂದಿದ್ದರು. ಬಳಿಕ ಪತ್ನಿ ಮತ್ತು ಮಗನ ಜೊತೆ ಮಗಳ ಶಾಲಾ ವಾರ್ಷಿಕೋತ್ಸವಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು.ಈ ವೇಳೆ ಪತ್ನಿ ಪ್ರಭಾಕರ್ ಅವರನ್ನ ಹುಡುಕಾಡಿದಾಗ ಅವರ ಶವ ಮನೆ ಆವರಣದ ಬಾವಿಯಲ್ಲಿ ಪತ್ತೆಯಾಗಿದೆ.
ಮೃತ ಪ್ರಭಾಕರ ಜೋಗಿಯವರು ನರ ದೌರ್ಬಲ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದೆ.ಶುಕ್ರವಾರ ಬೆಳಗ್ಗಿನಿಂದಲೇ ಅವರು ಮಂಕಾಗಿದ್ದು ಆರೋಗ್ಯ ಸಮಸ್ಯೆಯಿಂದಲೇ ಆತ್ಮಹತ್ಯೆಗೈದಿರೋದಾಗಿ ಶಂಕಿಸಲಾಗಿದೆ.
ಪ್ರಭಾಕರ ಜೋಗಿಯವರು ಉಳ್ಳಾಲ ತಾಲೂಕಿನ ಹಲವು ಶಾಲೆಗಳಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.ದೈಹಿಕ ಶಿಕ್ಷಕರ ಸಂಘಟನೆಗಳಲ್ಲಿಯೂ ಅವರು ಸಕ್ರಿಯರಾಗಿದ್ದರು.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿ ಯುಡಿಆರ್ ಪ್ರಕರಣ ದಾಖಲಿಸಿದ್ದಾರೆ.


