ಉಳ್ಳಾಲ: ಶ್ರೀ ರಾಮ ಭಜನಾ ಮಂದಿರ(ರಿ ) ಕೊಲ್ಯ ಇದರ 75ನೇ ವಾರ್ಷಿಕೋತ್ಸವದ ಅಂಗವಾಗಿ ಅಮೃತ ಮಹೋತ್ಸವ ಸಂಭ್ರಮ ಕಾರ್ಯಕ್ರಮವು ಡಿ.7 ರ ಭಾನುವಾರದಿಂದ ಡಿ 14 ರ ಭಾನುವಾರದ ವರೆಗೆ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಉಳ್ಳಾಲ್ ತಿಳಿಸಿದರು.

ಅವರು ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಡಿ.7 ರ ಭಾನುವಾರದಂದು ಸಂಜೆ 4. 30 ಗಂಟೆಗೆ ಕೊಲ್ಯ ಶ್ರೀ ಮೂಕಾಂಜಕಾ ದೇವಸ್ಥಾನದಿಂದ ಶ್ರೀ ರಾಮ ಭಜನಾ ಮಂದಿರದವರೆಗೆ ಕುಣಿತ ಭಜನೆ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಏಳು ದಿನಗಳ ಸಂಧ್ಯಾ ಭಜನೆ ಪ್ರಾರಂಭ (ಪ್ರತೀ ದಿನ ಸಂಜೆ 7:30ಕ್ಕೆ ಮಂಗಳಾಚರಣೆ)ನಡೆಯಲಿದೆ.
ಡಿ 12 ರ ಶುಕ್ರವಾರದಂದು ಸಂಜೆ 7.30 ಕ್ಕೆ ಸಂಧ್ಯಾ ಭಜನೆ ಮಂಗಳಾಚರಣೆಯ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವದೂತ ಗುಳಿಗೆ ಎಂಬ ತುಳುನಾಟಕ ನಡೆಯಲಿದೆ. ಡಿ. 13 ರ ಶನಿವಾರದಂದು ಬೆಳಿಗ್ಗೆ ಸೂರ್ಯೋದಯಕ್ಕೆ ಏಕಾಹ ಭಜನಾ ಸಂಕೀರ್ತನೆ ಆರಂಭಗೊಂಡು ಮಧ್ಯಾಹ್ನ 12. 30 ಗಂಟೆಯ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಮರುದಿನ ಸೂರ್ಯೋದಯಕ್ಕೆ ಮಂಗಳಾಚರಣೆಗೊಳ್ಳಲಿದೆ ಎಂದರು.
ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಗಟ್ಟಿ, ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷ ಪ್ರೀತಂ ಕುಮಾರ್ ಕೊಲ್ಯ, ಶ್ರೀ ರಾಮ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ವಿಶ್ವತ್ ಕುಲಾಲ್ ಕೊಲ್ಯ ಉಪಸ್ಥಿತರಿದ್ದರು.


