ಬಂಟ್ವಾಳ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದ್ರಾವಿಡ ಭಾಷೆಗಳ, ದ್ರಾವಿಡ ಸಂಸ್ಕ್ರತಿಗಳ ಮೇಲೆ ಸರಕಾರಿ ಪ್ರಾಯೋಜಿತ ಉತ್ತರ ಭಾರತೀಯರ ದಾಳಿಗಳು ನಡೆಯುತ್ತಿದೆ. ಇದು ಸಾಹಿತ್ಯ, ಸಂಸ್ಕ್ರತಿಗೆ ದೇಶದಲ್ಲಿ ಖ್ಯಾತಿ ಪಡೆದ ಕನ್ನಡ ಭಾಷೆಯ ಅಸ್ಮಿತೆ ಮತ್ತು ಸಂಸ್ಕ್ರತಿಯ ಮೇಲೆ ಪರಿಣಾಮ ಬೀರುತ್ತಿದೆ. ಒಂದು ಭಾಷೆ ಉಳಿದರೆ ಆ ಭಾಷೆಯೊಂದಿಗೆ ಒಂದು ಜನಾಂಗ ಮತ್ತು ಅವರ ಆಚಾರ, ವಿಚಾರಗಳು ಉಳಿಯುತ್ತದೆ. ದೇಶದ ಶ್ರೀಮಂತ ಭಾಷೆಯಾದ ಕನ್ನಡದೊಂದಿಗೆ ನಮ್ಮ ಸೋದರ ಭಾಷೆಗಳಾದ ಬ್ಯಾರಿ, ತುಳು, ಕೊಡವ, ಅರೆಗನ್ನಡ ಭಾಷೆಗಳನ್ನು ಉಳಿಸಿ ಬೆಳೆಸೋಣ ಎಂದು SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರು ಕರೆನೀಡಿದರು.

ಅವರು ಇಂದು ಬಿ ಸಿ ರೋಡಿನಲ್ಲಿ
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯು “ಸಮೃದ್ಧ, ಸದೃಢ, ಸ್ವಾಭಿಮಾನಿ ಕರ್ನಾಟಕ – ಒಲವಿನ ಕರ್ನಾಟಕ” ಧ್ಯೇಯ ವಾಕ್ಯದೊಂದಿಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು.

ಕಾರ್ಯಕ್ರಮವನ್ನು ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್. ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಬಿಜೆಪಿ ಸರ್ಕಾರ ರಾಜ್ಯದ ಸ್ವಾಭಿಮಾನದ ಸಂಕೇತವಾದ ಹಲವಾರು ಬ್ಯಾಂಕ್ ಗಳನ್ನು ಬೇರೆ ರಾಜ್ಯಗಳ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ, ಅದಲ್ಲದೇ ಬ್ಯಾಂಕ್ ಗಳಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಿಲ್ಲ. ಬ್ಯಾಂಕ್ ಗಳಲ್ಲಿ ಅನಕ್ಷರಸ್ಥರು, ಹಿರಿಯರು ಹಾಗೂ ಮಹಿಳೆಯರು ಯಾವುದಾದರೂ ಕೆಲಸಕ್ಕೆ ಹೋದಾಗ ಹೊರ ರಾಜ್ಯದ ಸಿಬ್ಬಂದಿಗಳೊಂದಿಗೆ ವ್ಯವಹರಿಸಲು ಹರಸಾಹಸ ಪಡುತ್ತಿದ್ದಾರೆ. ಬೆಳಿಗ್ಗೆ ಬ್ಯಾಂಕುಗಳಲ್ಲಿ ಗುಜರಾತಿ ಭಾಷೆಯ ಹಾಡುಗಳನ್ನು ಪ್ಲೇ ಮಾಡುವ ಮೂಲಕ ಕನ್ನಡದ ನಾಡ ಗೀತೆಯನ್ನು ಕಡೆಗಣಿಸುತ್ತಿದ್ದಾರೆ ಇದರ ವಿರುದ್ಧ ನಾವು ಕೈ ಕಟ್ಟಿ ಕೂರದೆ ಹೋರಾಟವನ್ನು ನಡೆಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಇಕ್ಬಾಲ್ ಇಝಾನ್, ಕ್ಷೇತ್ರ ಸಮಿತಿ ಸದಸ್ಯರಾದ ಯೂಸುಫ್ ಆಲಡ್ಕ, ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷರಾದ ಶರೀಫ್ ವಳವೂರು, ಕಲ್ಲಡ್ಕ ಬ್ಲಾಕ್ ಸಮಿತಿ ಅಧ್ಯಕ್ಷರಾದ ಸತ್ತಾರ್ ಕಲ್ಲಡ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಎಸ್ ಡಿ ಪಿ ಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಬೀರ್ ಅಕ್ಕರಂಗಡಿ ಸ್ವಾಗತಿಸಿದರು. ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಸಮಿತಿ ಕಾರ್ಯದರ್ಶಿ ಮುಬಾರಕ್ ಗೂಡಿನಬಳಿ ನಿರೂಪಿಸಿ, ವಂದಿಸಿದರು.


