ಪುತ್ತೂರು : ಪೊಲೀಸರು ಎನ್ಕೌಂಟರ್, ಶೂಟೌಟ್ ಮಾಡಲು ಪಾಲಿಸಬೇಕಾದ ನಿಬಂಧನೆಗಳನ್ನು ಪಾಲಿಸಿದ್ದಾರೋ ಇಲ್ಲವೇ ಎಂದು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಬೇಕಾದಗಿದ್ದ ಜವಾಬ್ದಾರಿಯುತ ಜನಪ್ರತಿನಿಧಿ ಸಾರ್ವಜನಿಕವಾಗಿ ಪ್ರಚೋದನೆ ಮಾಡುವಂತಹ ಹೇಳಿಕೆ ನೀಡಿರುವುದು ಅವರ ಸಂಘಿ ಮನೋಸ್ಥಿತಿಯನ್ನು ತೋರಿಸುತ್ತದೆ. ಇದು ಖಂಡನೀಯ ಎಂದು ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಮಂಗಳದಲ್ಲಿ ಗೋ ಸಾಗಾಟಗಾರರ ಮೇಲೆ ನಡೆದ ಪೊಲೀಸ್ ಶೂಟೌಟ್ ಪ್ರಕರಣವನ್ನು ಮತ್ತು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಯವರ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸಿ ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ “ಈಗ ಕಾಲಿಗೆ ಬಿದ್ದಿದೆ, ಮುಂದೆ ಎಲ್ಲೆಲ್ಲಿಗೋ ಬೀಳಬಹುದು” ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.
ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿಯ ನೀಡುವ ಹೇಳಿಕೆ ಜವಾಬ್ದಾರಿಯಿಂದ ಕೂಡಿರಬೇಕಾಗುತ್ತದೆ. ಗೋ ಸಾಗಾಟಗಾರರನ್ನು ಎನ್ಕೌಂಟರ್ ಮಾಡಲು ಪೊಲೀಸರನ್ನು ಅಶೋಕ್ ರೈ ಯವರೇ ಕಳುಹಿಸಿದಂತೆ ಹೇಳಿಕೆ ನೀಡಿರುವುದು ಒಪ್ಪುವಂತದ್ದಲ್ಲ. ಒಂದು ಸಮುದಾಯವನ್ನು ಗುರಿಪಡಿಸಿ ರಾಜಕೀಯ ಬೇಳೆ ಬೇಯಿಸಲು ಹೊರಟ ಶಾಸಕರು, ಯಾಕೆ ಗೋ ವ್ಯಾಪಾರದಲ್ಲಿ ತೊಡಗಿಸಿಕೊಂಡು ಇತರೆ ಸಮುದಾಯಾದವರು ಬಂಧಿಸಲ್ಪಟ್ಟಾಗ ಈ ಹೇಳಿಕೆ ಬರಲಿಲ್ಲ? ಕುಂದಾಪುರದಲ್ಲಿ ದನ ತಲೆ ಕಡಿದುಹಾಕಿ ಕೋಮುಗಲಭೆಗೆ ಯತ್ನಿಸಿದವರ ವಿರುದ್ಧ ಯಾಕೆ ಈ ಹೇಳಿಕೆ ಬರಲಿಲ್ಲ? ತಲ್ವಾರ್ ಪ್ರದರ್ಶನ ಮಾಡಿ ಸ್ಟೇಟಸ್ ಹಾಕಿ ಪ್ರಚೋದನೆ ಮಾಡಿದ ಭಜರಂಗದಳದವರ ಮೇಲೆ ಪ್ರಕರಣ ದಾಖಲಾದಾಗ ಯಾಕೆ ಈ ಹೇಳಿಕೆ ಬರಲಿಲ್ಲ? ಅಕ್ರಮ ಗರ್ಭಧಾರಣೆ ಮಾಡಿದವರ ಮೇಲೆ ಯಾಕೆ ಮಾತನಾಡಿಲ್ಲ? ಮುಸ್ಲಿಮರು ಆರೋಪಿಗಳಾದಾಗ ಮಾತ್ರ ಯಾಕೆ ಇವರಿಂದ ಈ ಹೇಳಿಕೆ ಬರುತ್ತದೆ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ಬ್ಯಾನ್ ಮಾಡಲು ಚರ್ಚೆ ಮಾಡುವ ಕಾಂಗ್ರೆಸ್ ನಾಯಕರು ಮೊದಲು ಆರ್ ಎಸ್ ಎಸ್ ಮನೋಸ್ಥಿತಿಯೊಂದಿಗೆ ಕಾಂಗ್ರೆಸ್ ನಲ್ಲಿ ಇರುವ ಅಶೋಕ್ ರೈ ಯಂತಹವರನ್ನು ಮೊದಲು ಕಾಂಗ್ರೆಸ್ ನಿಂದ ಹೊರ ಹಾಕಿ ಎಂದು ಸವಾಲು ಹಾಕಿದರು.
ಬಿಲ್ಡಪ್ ಗಾಗಿ ಶೂಟೌಟ್ ಪ್ರಕರಣವನ್ನು ರಾಜಕೀಯ ಹೇಳಿಕೆ ನೀಡಿ ಪ್ರಚೋದನೆ ನೀಡಿದ ಶಾಸಕರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.


