ಮೂಡುಬಿದಿರೆ: ಶ್ರೀ ವಿಠೋಬ ರುಕುಮಾಯಿ ಭಜನ ಮಂಡಳಿಯ ವಜ್ರಮಹೋತ್ಸವದ ಸ್ಮರಣಾರ್ಥವಾಗಿ ಗುಂಡ್ಯಡ್ಕ ಶ್ರೀನಿವಾಸಪುರ ಶ್ರೀ ವಿಠೋಬ ರುಕುಮಾಯಿ ದೇವಸ್ಥಾನದ ಆವರಣದಲ್ಲಿ ಲೋಕಕಲ್ಯಾಣಕ್ಕಾಗಿ ಜ.4ರಿಂದ 11ರವರೆಗೆ ‘ಅಖಂಡ ಭಜನಾ ಸಪ್ತಾಹ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಳದ ಪ್ರಮುಖರಾದ ಕೆ.ಆರ್. ಪಂಡಿತ್ ತಿಳಿಸಿದ್ದಾರೆ.

ಶುಕ್ರವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂ ಹಾಗೂ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ಪೂರ್ಣಾನುಗ್ರಹದೊಂದಿಗೆ ಈ ಪುಣ್ಯ ಕಾರ್ಯವು ನಡೆಯಲಿದೆ.
ಜ.4ರಂದು ಮುಂಜಾನೆ 5.30ಕ್ಕೆ ಮಂಗಳೂರು ಶ್ರೀ ರಾಮಕೃಷ್ಣ ದೇವಸ್ಥಾನದ ವೇದಮೂರ್ತಿ ಎಂ.ಕೇಶವ ಭಟ್ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ. ನೂರು ತಂಡಗಳು ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಂಡಳಿಯ ಸ್ಥಾಪಕರನ್ನು ಗೌರವ ಸೂಚಿಸುವ ನಿಟ್ಟಿನಲ್ಲಿ ಅವರ ಮನೆಗಳಿಗೆ ಡಿ.28ರಂದು ನಗರ ಭಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭಜನ ಮಂಡಳಿಯ ಅಧ್ಯಕ್ಷ ಪಾಂಡುರಂಗ ಸಪ್ಪೆ, ಕಾರ್ಯದರ್ಶಿ ಪಿ. ರಮೇಶ ಭಟ್ ಪರಾಡ್ಕರ್ , ಪ್ರಮುಖರಾದ ಮೋಘೆ ರಾಘವ ಭಟ್ ಪಾಲಡ್ಕ ಹಾಗೂ ಪ್ರಭಾಕರ ಪರಾಡ್ಕರ್, ಮಂದಾರ ರಾಜೇಶ್ ಭಟ್ ಉಪಸ್ಥಿತರಿದ್ದರು.


