ದೇರಳಕಟ್ಟೆ: ಪವಿತ್ರ ರಮಳಾನ್ ಮಾಸದಲ್ಲಿ ವಫಾತಾಗುವ ಭಾಗ್ಯ ದೊರೆತ ನಾಡಿನ ಹಿರಿಯ ಮುತ್ಸದ್ಧಿಗಳಲ್ಲೊ ಬ್ಬರಾಗಿದ್ದ ಕಲ್ಕಟ್ಟ ಹಸನಬ್ಬ ಹಾಜಿಯವರು ಮರಣ ಹೊಂದಿ ಈ ರಮಳಾನ್ ಗೆ ಹತ್ತು ವರ್ಷ ತುಂಬುತ್ತದೆ. ನಿನ್ನೆ ಕಲ್ಕಟ್ಟದಲ್ಲಿ ತರಾವೀಹ್ ಗೆ ಹೋಗಿದ್ದಾಗ ಅವರ ಪುತ್ರ ಬಶೀರ್ ಹಾಜಿಯವರು ಇದನ್ನು ನೆನಪಿಸಿದರು. ಕಣ್ಮರೆಯಾದರೂ ಮನ್ಮರೆಯದ ನೆನಪುಗಳು, ಆದರ್ಶ, ನಡೆನುಡಿಗಳ ಮೂಲಕ ಊರಲ್ಲಿ ಛಾಪು ಮೂಡಿಸಿ ಹೋಗಿರುವುದರಿಂದ ನಿಜಕ್ಕೂ ಹಸನಬ್ಬ ಹಾಜಿಯವರು ಸ್ಮರಣಾರ್ಹರು.

ಸತ್ಯನಿಷ್ಠೆ, ಧರ್ಮನಿಷ್ಠೆ, ನ್ಯಾಯದ ವಿಷಯದಲ್ಲಿ ರಾಜಿಯಿಲ್ಲದ ದಿಟ್ಟ ನಿಲುವು ಮುಂತಾದ ಮಾದರೀಯೋಗ್ಯ ನಡೆಗಳ ನೆನಪುಗಳನ್ನು ಅವರು ಉಳಿಸಿ ಹೋಗಿದ್ದಾರೆ. ಮಂಜನಾಡಿ ಅಲ್ ಮದೀನಾ ವಿದ್ಯಾ ಸಂಸ್ಥೆಯ ರೂವಾರಿ ಮರ್ಹೂಮ್ ಅಬ್ಬಾಸ್ ಉಸ್ತಾದರ ಒಡನಾಡಿಯಾಗಿ ಆ ಸಂಸ್ಥೆಯ ಅಭಿವೃದ್ಧಿಯಲ್ಲಿ ಪಾತ್ರ ವಹಿಸಿದವರು ಹಸನಬ್ಬ ಹಾಜಿಯವರು. ಊರು ಮತ್ತು ಆಸುಪಾಸುಗಳಲ್ಲಿ ಯಾವುದೇ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳಿದ್ದರೂ ಅಲ್ಲಿ ಹಸನಬ್ಬಾಜಿಯವರ ಸಕ್ರಿಯ ಪಾತ್ರ ಇದ್ದೇ ಇರುತ್ತಿತ್ತು.
ನೀತಿ, ನ್ಯಾಯದ ವಿಷಯದಲ್ಲಿ ನಿಷ್ಠುರವಾದಿಯಾಗಿದ್ದುದರಿಂದ ಊರಿಡೀ ಅವರ ಮೇಲೆ ಒಂದು ವಿಧ ಗೌರವ ಭಯ ಇತ್ತು. ಅಲ್ಲಾಹು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕಬರನ್ನು ಸ್ವರ್ಗಧಾಮವಾಗಿಸಲಿ, ಆಮೀನ್ ಯಾರಬ್ಬಲ್ ಆಲಮೀನ್.
-ಡಿ.ಐ. ಅಬೂಬಕರ್ ಕೈರಂಗಳ


