ಬೆಂಗಳೂರು: ಕಾಂಗ್ರೆಸ್ ಸರಕಾರ ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸುವ ಮೊದಲು ಶ್ರೀರಂಗಪಟ್ಟಣ ಸಹಿತ ರಾಜ್ಯಾದ್ಯಂತ ಟಿಪ್ಪು ಜಯಂತಿಯನ್ನು ರಾಜಾರೋಷವಾಗಿ ಬಹಳ ಸಂಭ್ರಮದಿಂದ ಜನತೆ ಆಚರಿಸುತ್ತಿದ್ದರು. ಯಾರ ಬೇಡಿಕೆ ಇಲ್ಲದೆ, ಏಕಾಏಕಿ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಟಿಪ್ಪು ಜಯಂತಿ ಆಚರಿಸುವ ಘೋಷಣೆ ಮಾಡಿ, ಕೇವಲ ಬಿಜೆಪಿ ಮತ್ತು ಸಂಘಪರಿವಾರದ ಒತ್ತಡಕ್ಕೆ ಮಣಿದು ತಾನು ಟಿಪ್ಪು ಜಯಂತಿಯನ್ನು ಆಚರಿಸುವುದನ್ನು ಕೈ ಬಿಟ್ಟಿದಲ್ಲದೇ ಶ್ರೀರಂಗಪಟ್ಟಣ ಸೇರಿದಂತೆ ರಾಜ್ಯಾದ್ಯಂತ ಜನತೆ ಖಾಸಗಿಯಾಗಿಯೂ ಜಯಂತಿ ಆಚರಿಸಲೂ ನಿಷೇಧ ಹೇರಿ ಮೃದು ಹಿಂದುತ್ವವನ್ನು ಪ್ರದರ್ಶಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ರವರನ್ನು ಅವಮಾನಿಸಲಾಗಿದೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಅಭಿಮಾನಿಗಳಿಗೆ ಟಿಪ್ಪು ಸಮಾಧಿಯ ದರ್ಶನ ಮಾಡಕ್ಕೂ ಅವಕಾಶ ನಿರಾಕರಿಸಿದ ರಾಜ್ಯ ಸರ್ಕಾರ ಬಜರಂಗದಳದ ಅನೇಕ ಕಾರ್ಯಕ್ರಮಗಳಿಗೆ ಶ್ರೀರಂಗಪಟ್ಟಣದಲ್ಲಿ ಅವಕಾಶ ನೀಡಿತ್ತು. ಇದರಿಂದ ಕಾನೂನು ಸುವ್ಯಸ್ಥೆ ಹಾಳಾಗಲ್ಲಿಲವೇ..?
ಟಿಪ್ಪು ಸುಲ್ತಾನ್ ಮುಸ್ಲಿಂ ಅಲ್ಲದೆ, ಈ ನೆಲದ ಬೇರೆ ಯಾವುದೇ ಪ್ರಬಲ ಜಾತಿಯಲ್ಲಿ ಹುಟ್ಟಿದ್ದರೆ, ಟಿಪ್ಪು ಸಾಧನೆಗಾಗಿ ಅವರನ್ನು ಜಾಗತಿಕ ನಾಯಕನಾಗಿ ಈ ನಮ್ಮ ರಾಜಕೀಯ ವ್ಯವಸ್ಥೆ ವಿಜೃಂಭಿಸುತಿತ್ತು. ಟಿಪ್ಪು ಕೇವಲ ಮುಸ್ಲಿಂನಾಗಿರುವುದಕ್ಕಾಗಿಯೇ ಈ ದುರಂತಮಯ ವಾತಾವರಣ ಕಾಣಲು ಸಿಗುತ್ತಿದೆ.

ಚುನಾವಣೆಯ ಸಂದರ್ಭದಲ್ಲಿ ತಾನು ಜಾತ್ಯತೀತ ತತ್ವವನ್ನು ಪ್ರತಿಪಾದಿಸುವ ಪಕ್ಷ, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಗುಲ್ಲೆಬ್ಬಿಸಿ,
ಮುಕ್ತ ಮುಸ್ಲಿಂ ಸಮುದಾಯದ ಮತವನ್ನು ಪಡೆದು ಅಧಿಕಾರ ಹಿಡಿದ ನಂತರ ಎಂದಿನಂತೆ ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡುವುದು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿಯಾಗಿ ಬಿಟ್ಟಿದೆ. ಕಾಂಗ್ರೆಸ್ ಪಕ್ಷದ ಈ ಒಳವರ್ಮವನ್ನು ಮುಸ್ಲಿಂ ಸಮುದಾಯ ಅರ್ಥ ಮಾಡಿಕೊಳ್ಳಲ್ಲಿಲ್ಲ ಎಂದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಜಾಹಿದ್ ಪಾಷಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


