ಉಳ್ಳಾಲ: ಹಿಂದೆ ಅಡುಗೆ ಕೋಣೆಗೆ ಸೀಮಿತವಾಗಿದ್ದ ಮಹಿಳೆಯರು ಪ್ರಸ್ತುತ ಅಂತರೀಕ್ಷಕ್ಕೆ ಏರುವ ಮೂಲಕ ಎಲ್ಲಾ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆಯರನ್ನು ಪೂಜಿಸುವ ಹಾಗೂ ಗೌರವಿಸುವಲ್ಲಿ ದೇವರು ನೆಲೆಸುತ್ತಾರೆ ಎನ್ನುವುದು ಸತ್ಯ. ಮಹಿಳೆ ಸಕಾರಾತ್ಮಕವಾಗಿ ಇರುವ ಮನೆ ಬೆಳಗುತ್ತದೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಅಭಿಪ್ರಾಯಪಟ್ಟರು.

ಮಂಗಳೂರಿನ ಸಮರ್ಪಣಾ ಪರಿವಾರ್ ಟ್ರಸ್ಟ್ ಆಶ್ರಯದಲ್ಲಿ ‘ಮಹಿಳಾ ದಿನಾಚರಣೆ – 2026’ ಪ್ರಯುಕ್ತ ಕೊಲ್ಯ ಖಾಸಗಿ ಸಭಾಂಗಣದಲ್ಲಿ ಭಾನುವಾರ ನಡೆದ ಸಾಧಕಿಯರಿಗೆ ಸನ್ಮಾನ ಹಾಗೂ ಪರಿವಾರ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಹಿಳೆಗೂ ದೇವರು ಶಕ್ತಿ ಕೊಟ್ಟಿದ್ದಾನೆ. ಹತ್ತು ಮಕ್ಕಳನ್ನು ಸಾಕುವ ಶಕ್ತಿ ತಾಯಿಗಿದೆ, ಆದರೆ ಹತ್ತು ಮಕ್ಕಳಿಗೆ ಒಂದು ತಾಯಿಯನ್ನು ಸಾಕುವ ಶಕ್ತಿ ಇಲ್ಲದ ಪರಿಸ್ಥಿತಿ ಇಂದಿನದ್ದಾಗಿದೆ. ದೇಶದಲ್ಲಿ ಮೀಸಲಾತಿ ಬಂದ ಬಳಿಕ ಮಹಿಳೆಯರು ಎಲ್ಲಾ ರಂಗದಲ್ಲಿ ಮಿಂಚುವಂತಾಗಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರದ ಸಾಧಕರಾದ ಮೈಮೂನ ಎಂ.ಎ.ಹರೇಕಳ, ಚಂದ್ರಕಲಾ ಎಸ್, ಲಿಜಿ ನೊರೋನ್ಹ, ಸುಮಂಗಲಿ ರಾವ್, ವಜ್ರ ಗುಜರನ್ ಇವರನ್ನು ಸನ್ಮಾನಿಸಲಾಯಿತು. ಸಮರ್ಪಣಾ ಪರಿವಾರ್ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಪ್ರಶಾಂತ್ ಉಡುಪ ಅಧ್ಯಕ್ಷತೆ ವಹಿಸಿದ್ದರು.
ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್.ಶೆಟ್ಟಿ, ತೀಯಾ ಸಮಾಜದ ಅಧ್ಯಕ್ಷ ಜಯಂತ್ ಕೊಂಡಾಣ, ಲಯನ್ಸ್ ಕ್ಲಬ್ ಪೆರ್ಮನ್ನೂರು ವಲಯಾಧ್ಯಕ್ಷೆ ಜೆಸಿಂತಾ ಮೆಂಡೋನ್ಸ, ಛೋಟಾ ಮಂಗಳೂರು ಘಟಕಾಧ್ಯಕ್ಷೆ ಹರಿಣಾಕ್ಷಿ, ಮುಡಿಪು ವಿಶ್ವಕರ್ಮ ಸಂಘದ ಅಧ್ಯಕ್ಷ ಸುರೇಶ್ ಆಚಾರ್ಯ, ರೈಲ್ವೇ ಸಲಹಾ ಮಂಡಳಿ ಸದಸ್ಯೆ ಸುಷ್ಮಾ ಕೋಟ್ಯಾನ್, ಸರ್ವಜ್ಞಾ ಅಕಾಡೆಮಿ ಆಡಳಿತ ವ್ಯವಸ್ಥಾಪಕ ಸುರೇಶ್ ಎಂ.ಎಸ್, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ದಿನೇಶ್ ನಾಯಕ್, ಸಮಾಜ ಸೇವಕಿ ಗಾಯತ್ರಿ ಕಿಶೋರ್ ಕುತ್ತಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲಿಲ್ಲಿ ಪಾಯ್ಸ್ ಮೊದಲಾದವರು ಉಪಸ್ಥಿತರಿದ್ದರು.
ಸಮರ್ಪಣಾ ಪರಿವಾರ್ ಅಧ್ಯಕ್ಷ ಮೋಹನ್ ಶಿರ್ಲಾಲ್ ಸ್ವಾಗತಿಸಿದರು. ಶಿಕ್ಷಕರಾದ ಜಯಲಕ್ಷ್ಮಿ, ಚಂದ್ರಶೇಖರ ಹಾಗೂ ವಸಂತ ರೈ ಸನ್ಮಾನ ಪತ್ರ ವಾಚಿಸಿದರು. ವಸಂತ ಕೋಡಿ ವಂದಿಸಿದರು. ಜಗನ್ನಾಥ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.


