ಮೂಡುಬಿದಿರೆ: ಕಂದಾಯ ಸಚಿವರಾಗಿರುವ ಕೃಷ್ಣ ಭೈರೇಗೌಡ ಅವರು ಅಕ್ರಮ ಸಕ್ರಮಕ್ಕೆ ಕೆಲವೊಂದು ಕಠಿಣ ಕಾನೂನು ತಂದಿರುವುದರಿಂದ ಅರ್ಜಿದಾರರ ವಿವರಗಳೆಲ್ಲಾ ಆಪ್ ಮೂಲಕವೇ ದಾಖಲಾಗಬೇಕಿದೆ, ಹಾಗಾಗಿ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ ಹೊರತು ತಾನು ಅಕ್ರಮ ಸಕ್ರಮ ಸಮಿತಿಯ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಆದ್ದರಿಂದ ಬೇರೆಯವರೂ ರಾಜಕೀಯ ಮಾಡುವುದು ಬೇಡ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಇತ್ತೀಚೆಗೆ ಮಿತ್ತಬೈಲು ವಾಸುದೇವ ನಾಯಕ್ ಅವರು ಪತ್ರಿಕಾಗೋಷ್ಠಿ ನಡೆಸಿ ‘ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರು ಈ ಸಮಿತಿಗಳ ಮೀಟಿಂಗ್ ಮಾಡದೆ ಬಡ ಜನರಿಗೆ ಅನ್ಯಾಯವೆಸಗುತ್ತಿದ್ದಾರೆ’ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೋಟ್ಯಾನ್ ಅವರು ಸ್ಪಷ್ಟನೆ ನೀಡಲು ಗುರುವಾರ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈಗ ಹತ್ತು ಫೈಲುಗಳು ರೆಡಿಯಾಗಿದ್ದು ಅದನ್ನು ಶೀಘ್ರದಲ್ಲೇ ನೀಡುವ ವ್ಯವಸ್ಥೆ ಮಾಡುತ್ತೇವೆ, ಉಳಿದಂತೆ ಹಂತಹಂತವಾಗಿ ನೀಡಿತ್ತೇವೆ ‘ ಎಂದು ಸ್ಪಷ್ಟಪಡಿಸಿದರು.
ನಾನು ಕಳೆದ ಅವಧಿಯಲ್ಲಿ ಅಕ್ರಮಸಕ್ರಮ ಸಮಿತಿಯಲ್ಲಿ ಸಾಕಷ್ಟು ಜನರಿಗೆ ಹಕ್ಕುಪತ್ರ ನೀಡಿದ್ದೇನೆ, ನನ್ನ ಕಚೇರಿಗೆ ಬಂದ ಯಾರಿಗೂ ಆ ಪಕ್ಷದವನು,ಈ ಪಕ್ಷದವನು ಎಂದು ತಾರತಮ್ಯ ಮಾಡಿಲ್ಲ, ಸಾಕಷ್ಟು ಅನುಭವಿಯಾಗಿರುವ ವಾಸುದೇವ ನಾಯಕ್ ಅವರು ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಯಾಕೆ ಎಂದು ಅರ್ಥವಾಗುತ್ತಿಲ್ಲವೆಂದರು. ನಾನು ಈ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡಿಲ್ಲ ವಾಸುದೇವ ನಾಯಕರೂ ರಾಜಕೀಯ ಮಾಡುವುದು ಬೇಡ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಶಾಂತಿಪ್ರಸಾದ್ ಹೆಗ್ಡೆ, ಬಾಹುಬಲಿ ಪ್ರಸಾದ್,ರಂಜಿತ್ ಪೂಜಾರಿ, ಜಯಶ್ರೀ ಕೇಶವ್, ನಾಗರಾಜ್ ಪೂಜಾರಿ, ಸುಕೇಶ್ ಶೆಟ್ಟಿ ಎದಮಾರು, ಗೋಪಾಲ ಶೆಟ್ಟಿಗಾರ್, ಲಕ್ಷ್ಮಣ ಪೂಜಾರಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.


