ಮಂಗಳೂರು, ನ. 6: ರೈತಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮಂಗಳೂರು, ಕೃಷಿ ಇಲಾಖೆ ಮಂಗಳೂರು, ಪೊಲದವರ ಯಾನೆ ಗಟ್ಟಿಯವರ ಸಮಾಜ ಸೇವಾ ಸಂಘ ಹಾಗೂ ಉಳ್ಳಾಲ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಉಳ್ಳಾಲ ಕೃಷಿ ಉತ್ಸವ ಮತ್ತು ದೇಸಿ ಆಹಾರ ಮೇಳ ನವೆಂಬರ್ 8ರಿಂದ 10ರವರೆಗೆ ತೊಕ್ಕೊಟ್ಟು ಗಟ್ಟಿ ಸಮಾಜಭವನ ಆವರಣದಲ್ಲಿ ನಡೆಯಲಿದೆ.
ಶನಿವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮಕ್ಕೆ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಚಾಲನೆ ನೀಡಲಿದ್ದು, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ, ಹೊನ್ನಪ್ಪ ಗೋವಿಂದ ಗೌಡ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಪೆರ್ಮನ್ನೂರು ಸೇಂಟ್ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಬಿ.ಜಿ.,ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಶೆಟ್ಟಿ ಕೆಳಗಿನಕೋಟೆಕಾರುಗುತ್ತು, ಪೊಲದವರ ಯಾನೆ ಗಟ್ಟಿಯವರ ಸೇವಾ ಸಮಾಜದ ಅಧ್ಯಕ್ಷ ಜನಾರ್ದನ ಗಟ್ಟಿ ಕನ್ನಿಮನೆ, ಉಪಾಧ್ಯಕ್ಷ ಚಂದ್ರಶೇಖರ ಗಟ್ಟಿ ಗುಂಡ್ಯ, ಧಾರ್ಮಿಕ ಪರಿಷತ್ಸದಸ್ಯ ಸುರೇಶ್ ಭಟ್ನಗರ ಉಪಸ್ಥಿತರಿರುವವರು.

ಗ್ರಾಮಾಂತರದ ಕೃಷಿಕರು ಮತ್ತು ಪೇಟೆಯ ಗ್ರಾಹಕರ ನಡುವೆ ಕೊಂಡಿಯಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗ್ರಾಮೀಣ ರೈತರು ಬೆಳೆದ ಉತ್ಪನ್ನಗಳನ್ನು ಕೃಷಿ ಉತ್ಸವದಲ್ಲಿ ನೇರ ಮಾರಾಟ ಮಾಡಲಿದ್ದಾರೆ. ಅದೇ ರೀತಿ ಕೃಷಿಕರಿಗೆ ಅಗತ್ಯವಿರುವ ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.ಇಲಾಖಾ ಮಾಹಿತಿಗಳು, ತರಕಾರಿ ಬೀಜ, ಸಸ್ಯಗಳ ಮಾರಾಟ, ಕೃಷಿ ಗೊಬ್ಬರ ಮಾರಾಟ, ವೈವಿಧ್ಯಮಯ ಹಣ್ಣು, ತರಕಾರಿ ಗಿಡಗಳ ಮಾರಾಟವಿರಲಿದೆ.
ಜೇನು ಕೃಷಿ, ಗೇರು ಕೃಷಿ ಕುರಿತು ಮಾಹಿತಿ ಮಳಿಗೆ ಇರಲಿದೆ.ಗುಡಿ ಕೈಗಾರಿಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಣ್ಣಿನ ಮಡಿಕೆ ತಯಾರಿ, ಬುಟ್ಟಿ ತಯಾರಿ ಮೊದಲಾದ ಪ್ರಾತ್ಯಕ್ಷಿಕೆ ಮತ್ತು ನೇರ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗೃಹೋದ್ಯಮಿಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಳಿಗೆ ಸ್ಥಾಪಿಸಿ ಪ್ರೋತ್ಸಾಹ ನೀಡಲಾಗುತ್ತಿದೆ.ಕೃಷಿ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ 6೦ಕ್ಕೂ ಅಧಿಕ ಅಲಂಕಾರಿಕಾ ಹಕ್ಕಿಗಳ ಪ್ರದರ್ಶನ ಮತ್ತು ವಿವಿಧ ಬಣ್ಣದ ಮತ್ಸ್ಯ ಪ್ರದರ್ಶನ ನಡೆಯಲಿದೆ. ಪ್ರತಿದಿನ ಸಾಧಕ ರೈತರಿಗೆ ಸನ್ಮಾನ ನಡೆಯಲಿದೆ.
ಬೆಳಗ್ಗೆ ೯ರಿಂದ ರಾತ್ರಿ ೯ವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಭರತ್ರಾಜ್ ಸೊರಕೆ, ಕಾರ್ಯದರ್ಶಿ ಲತೇಶ್ ಮಳಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


