ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ಬಂಧನವಾಗಿರುವುದು ಅತ್ಯಂತ ಗಂಭೀರ ಹಾಗೂ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಅಮಾನವೀಯ ಮತ್ತು ಪೈಶಾಚಿಕ ಕೃತ್ಯಗಳು ಸಮಾಜದ ನೈತಿಕ ಮೌಲ್ಯಗಳಿಗೆ ಕಳಂಕವಾಗಿದ್ದು, ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಯಕ್ಷಪ್ರಶ್ನೆಯನ್ನು ಎತ್ತಿವೆ.ಯಾವುದೇ ಮಹಿಳೆ ಭಯವಿಲ್ಲದೆ ಬದುಕುವ ಮತ್ತು ಸಂಚರಿಸುವ ಹಕ್ಕು ಹೊಂದಿದ್ದಾಳೆ. ಆದರೆ ಇಂತಹ ಘಟನೆಗಳು ಮಹಿಳೆಯರ ಭದ್ರತೆ ಮತ್ತು ಗೌರವಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳು ಮತ್ತು ಘಟನೆಗೆ ಸಂಬಂಧಿಸಿದ ವಿಡಿಯೋ ಚಿತ್ರೀಕರಣದ ಮಾಹಿತಿಗಳು ಹೊರಬಂದಿದ್ದರೆ, ಅದು ಇನ್ನಷ್ಟು ಕಳವಳಕಾರಿ ಸಂಗತಿಯಾಗಿದೆ.
ಈ ಪ್ರಕರಣದ ತನಿಖೆ ಸಂಪೂರ್ಣ ನಿಷ್ಪಕ್ಷಪಾತ, ಪಾರದರ್ಶಕ ಮತ್ತು ವೃತ್ತಿಪರ ರೀತಿಯಲ್ಲಿ ನಡೆಯಬೇಕು. ಆರೋಪಿಗಳು ಯಾರೇ ಆಗಿರಲಿ, ಅವರ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ ಹಿನ್ನೆಲೆಯನ್ನು ಪರಿಗಣಿಸದೆ ಕಾನೂನಾತ್ಮ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ರಾಜಕೀಯ ಒತ್ತಡ, ಪ್ರಭಾವ ಅಥವಾ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಸತ್ಯಾಂಶವನ್ನು ಹೊರತರುವ ಜವಾಬ್ದಾರಿ ತನಿಖಾ ಸಂಸ್ಥೆಗಳ ಮೇಲಿದೆ.ಸಂತ್ರಸ್ತೆಗೆ ಅಗತ್ಯವಾದ ವೈದ್ಯಕೀಯ, ಕಾನೂನು ಹಾಗೂ ಮಾನಸಿಕ ನೆರವು ಒದಗಿಸುವುದರ ಜೊತೆಗೆ, ಶೀಘ್ರ ನ್ಯಾಯ ದೊರಕುವಂತೆ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ನ್ಯಾಯ ವಿಳಂಬನೆಯೇ ಅತ್ಯಾಚಾರಗಳು ಮರುಕಳಿಸಲು ಕಾರಣ . ಆದ್ದರಿಂದ ತ್ವರಿತ ನ್ಯಾಯ ಒದಗಿಸಬೇಕು.ಮಹಿಳೆಯರ ಸುರಕ್ಷತೆ ಕೇವಲ ಭಾಷಣಗಳು, ಘೋಷಣೆಗಳು ಅಥವಾ ಭರವಸೆಗಳಿಗೆ ಸೀಮಿತವಾಗದೆ, ಕಾನೂನು ಜಾರಿಯ ಕಟ್ಟುನಿಟ್ಟಿನ ಕ್ರಮಗಳು ಮತ್ತು ಸಮಾಜದ ಜಾಗೃತಿಯ ಮೂಲಕ ಕಾರ್ಯರೂಪದಲ್ಲಿ ಕಾಣಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ, ಕಾನೂನು ವ್ಯವಸ್ಥೆ ಹಾಗೂ ಸಮಾಜ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು.ಸಂತ್ರಸ್ತೆಗೆ ನ್ಯಾಯ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯದ್ಯಕ್ಷೆ ಫಾತಿಮಾ ನಸೀಮವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



