
ವಿಟ್ಲ: ವಿಟ್ಲ–ಸಾಲೆತ್ತೂರು–ಮುಡಿಪು ಮಾರ್ಗದಲ್ಲಿ ಸರಕಾರಿ ಬಸ್ ಸೌಲಭ್ಯಗಳ ಕೊರತೆಯಿಂದ ಶಾಲೆ ಮತ್ತು ಕಾಲೇಜು ಮಕ್ಕಳಿಗೆ ತೀವ್ರ ಅನಾನುಕೂಲ ಉಂಟಾಗಿದೆ ಎಂದು ಎಸ್ಡಿಪಿಐ ಕೊಳ್ನಾಡು ಗ್ರಾಮ ಸಮಿತಿ ಅದ್ಯಕ್ಷ ಬಶೀರ್ ಕೊಳ್ನಾಡ್ ತಿಳಿಸಿದ್ದಾರೆ.
ಪ್ರತಿ ದಿನ ನೂರಾರು ವಿದ್ಯಾರ್ಥಿಗಳು ಈ ಮಾರ್ಗದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ತೆರಳುತ್ತಿದ್ದು, ಸರಕಾರಿ ಬಸ್ಸುಗಳ ಅಭಾವದಿಂದ ಅವರು ಸಮಯಕ್ಕೆ ತಲುಪುವಲ್ಲಿ ದೊಡ್ಡ ತೊಂದರೆ ಅನುಭವಿಸುತ್ತಿದ್ದಾರೆ. ಖಾಸಗಿ ಸಾರಿಗೆ ವಾಹನಗಳು ಎಲ್ಲರಿಗೂ ಲಭ್ಯವಿಲ್ಲದ ಕಾರಣ ಗ್ರಾಮೀಣ ಜನ ಜೀವನ ಅಸ್ತವ್ಯಸ್ಥವಾಗಿದೆ.
ಈ ಪರಿಸ್ಥಿತಿಯನ್ನು ಮನಗಂಡು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ವಿಟ್ಲ–ಸಾಲೆತ್ತೂರು–ಮುಡಿಪು ಮಾರ್ಗದಲ್ಲಿ ತಕ್ಷಣವೇ ಸರಕಾರಿ ಬಸ್ಸು ಸೇವೆ ಆರಂಭಿಸುವಂತೆ ಬಶೀರ್ ಕೊಳ್ನಾಡ್ ಅವರು ಸಾರಿಗೆ ಇಲಾಖೆಯ ಗಮನ ಸೆಳೆದಿದ್ದಾರೆ.

“ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಸಾರಿಗೆ ಮೂಲಭೂತ ಅಗತ್ಯವಾಗಿದ್ದು, ಸರ್ಕಾರಿ ಬಸ್ಸುಗಳ ಕೊರತೆಯಿಂದ ಗ್ರಾಮಗಳ ಅಭಿವೃದ್ಧಿ ತಡೆಯಲ್ಪಡುತ್ತಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆಯು ಈ ಭಾಗದ ಮಹಿಳೆಯರಿಗೆ ಹಗಲು ಕನಸಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಬೇಕು” ಎಂದು ಎಸ್ಡಿಪಿಐ ಕೊಳ್ನಾಡು ಗ್ರಾಮ ಸಮಿತಿ ಅದ್ಯಕ್ಷ ರಾದ ಬಶೀರ್ ಕೊಳ್ನಾಡು ಒತ್ತಾಯಿಸಿದ್ದಾರೆ.


