ಮಂಗಳೂರು: ಪ್ರಖ್ಯಾತ ಅನಿವಾಸಿ ಉದ್ಯಮಿ, ಸಮಾಜ ಸೇವಕ, ಕೊಡುಗೈದಾನಿ ಜನಾಬ್ ವೈಟ್ ಸ್ಟೋನ್ ಶರೀಫ್ ಹಾಜಿಯವರು ಜೋಕಟ್ಟೆ ಮುಹ್ಯುದ್ದೀನ್ ಹೊಸಜಮಾ ಮಸ್ಜಿದ್ ಹಾಗೂ ನೂರಾನಿಯಾ ಜಮಾಅತ್ ಕಮಿಟಿ ಅಧ್ಯಕ್ಷರಾಗಿ ಆಯ್ಕೆಯಾದ ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಪ್ರತಿಷ್ಠಿತ ಜೋಕಟ್ಟೆ ಅಂಜುಮನ್ ಖುವ್ವತುಲ್ ಇಸ್ಲಾಮ್ ( ರಿ) ಸಂಘಟನೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹೊರಡಿಸಿದ ಅಭಿನಂದನೆಯಲ್ಲಿ ಒಂದು ಮಾತು ಹೇಳಿದ್ದಾರೆ. ಅದೇನೆಂದರೆ;
” ನಿಮ್ಮ ಹಿಂದಿನ ಸೇವಾವಧಿಯಲ್ಲಿ ಜಮಾಅತಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ನಿಮ್ಮ ಸೇವೆ ಅನನ್ಯ ” ಎಂಬ ಮಾತು. ಜನಾಬ್ ಶರೀಫ್ ಹಾಜಿಯವರು ಈ ಹಿಂದೆಯೂ ಜೋಕಟ್ಟೆಯಲ್ಲಿ ನೇತೃಸ್ಥಾನ ವಹಿಸಿದ್ದರಲ್ಲದೆ ಜಮಾಅತಿನ ಎಲ್ಲಾ ಅಭಿವೃದ್ಧಿಯಲ್ಲಿ ಅಪಾರವಾದ ಪಾತ್ರ ವಹಿಸಿದ್ದರು ಎಂಬುದನ್ನು ಇದು ಸೂಚಿಸುತ್ತದೆ. ಹೊರಗಿನ ನಾನಾ ಕಡೆಗಳ ದೀನೀ ಸ್ಥಾಪನೆಗಳಿಗೆ ಉದಾರ ಕೊಡುಗೆ ನೀಡುತ್ತಿರುವ ಇವರು ಸ್ವನಾಡಿಯ ಅಭಿವೃದ್ದಿ ವಿಷಯದಲ್ಲಿ ಅದೆಷ್ಟು ಮುತುವರ್ಜಿ ವಹಿಸುತ್ತಿರಬಹುದು ಎಂಬುದನ್ನು ಊಹಿಸಬಹುದಾಗಿದೆ.
ನಾನಾ ಊರುಗಳ ಧಾರ್ಮಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿರುವ ಇವರ ಸೇವೆ ಅಷ್ಟಕ್ಕೇ ಸೀಮಿತವಲ್ಲ. ಸಾಮಾಜಿಕ ಔನ್ಯತ್ಯಕ್ಕಾಗಿ, ಪಿಡುಗುಗಳ ನಿಗ್ರಹಕ್ಕಾಗಿ ಇವರು ಅರ್ಪಣಾ ಪ್ರಜ್ಞೆಯಿಂದ ದುಡಿಯುತ್ತಿದ್ದಾರೆ. ಸಮಾಜಕ್ಕೆ ದೊಡ್ಡ ಕಂಟಕವಾಗಿ ಮಾರ್ಪಟ್ಟಿರುವ ಮಾದಕ ದ್ರವ್ಯದ ನಿಗ್ರಹಕ್ಕಾಗಿ ನಡೆಸಲಾಗುತ್ತಿರುವ ಹೋರಾಟದ ಮುಂಚೂಣಿಯಲ್ಲಿ ಇವರಿದ್ದಾರೆ. ಮತ್ತೋರ್ವ ಹೋರಾಟಗಾರ ಇಕ್ಬಾಲ್ ಬಾಳಿಲ ಅವರಿಗೆ ಹೆಗಲೆಣೆಯಾಗಿ ಎಲ್ಲಾ ವಿಧ ಸಹಕಾರಗಳನ್ನು ನೀಡುತ್ತಾ ಬಂದಿದ್ದಾರೆ.
ಕಾಶಿಪಟ್ಣ ದಾರುನ್ನೂರ್ ಎಜ್ಯುಕೇಶನ್ ಸೆಂಟರ್ ನ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ಅದರ ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಿದ್ದಾರೆ. ಧಾರ್ಮಿಕ , ಶೈಕ್ಷಣಿಕ, ಸಾಮಾಜಿಕ ರಂಗಗಳಲ್ಲಿ ಅನನ್ಯ ಸೇವೆ ಸಲ್ಲಿಸುವುದರ ಜೊತೆಗೆ B- HUMAN ಎಂಬ ಚಾರಿಟಿ ಸಂಸ್ಥೆಯ ಅಧ್ಯಕ್ಷರಾಗಿ ಸೇವೆಯಲ್ಲಿದ್ದಾರೆ.
ಇವರ ನೇತೃತ್ವದ B- Human ಸಂಸ್ಥೆಯು ಡಯಾಲಿಸಿಸ್ ವಿಭಾಗಕ್ಕೆ ನೀಡಿದ ಕೊಡುಗೆಗಳು ಅಚ್ಚರಿದಾಯಕ. ಮಂಗಳೂರು ಮತ್ತು ಆಸುಪಾಸಿನ ಅನೇಕ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಡಯಾಲಿಸಿಸ್ ಯಂತ್ರವನ್ನು ಉದಾರವಾಗಿ ನೀಡಿ ಡಯಾಲಿಸಿಸ್ ಗೆ ಗುರಿಯಾಗುವ ಬಡವರ ಪಾಲಿಗೆ ಆಶಾಕಿರಣವಾಗಿದ್ದಾರೆ. ಅದೆಷ್ಟೋ ಬಡ ರೋಗಿಗಳು ಈ ಸಂಸ್ಥೆಯ ಈ ಉದಾರ ಕೊಡುಗೆಗಳಿಂದ ಅಪಾರ ಪ್ರಯೋಜನ ಪಡೆದುಕೊಂಡು ಬರುತ್ತಿದ್ದಾರೆ.
ಅಲ್ಲಾಹನ ಅನುಗ್ರಹದಿಂದ ವಿದೇಶದ ಉದ್ದಿಮೆಯಲ್ಲಿ ಅಪಾರ ಯಶಸ್ಸು ಪಡೆದು ಸಾವಿರಾರು ಮಂದಿಗೆ ಉದ್ಯೋಗಾವಕಾಶ ನೀಡಿದ ಆಶ್ರಯದಾತರಾಗಿ ಅಪಾರ ಸಂಪತ್ತಿನ ಒಡೆಯರಾಗಿರುವ ಇವರು ಸಮಾಜ ಸೇವೆಯಲ್ಲಿ ತೊಡಗಿರುವುದರಿಂದ ವೈಯಕ್ತಿವಾಗಿ ಯಾವುದೇ ಲಾಭ ಇಲ್ಲದಿದ್ದರೂ ಅಲ್ಲಾಹನ ಪ್ರತಿಪಲಾಪೇಕ್ಷೆಯಿಂದ ಮಾತ್ರ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಲ್ಲಾಹು ಅವರಿಗೆ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ. ಅವರ ಬಹುಶ್ರುತ ಸೇವೆಗಳನ್ನು ಸುಕೃತಗಳಾಗಿ ಸ್ವೀಕರಿಸಿ ಅರ್ಹ ಪ್ರತಿಫಲವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದು ಡಿ.ಐ. ಅಬೂಬಕರ್ ಕೈರಂಗಳ ಅಭಿನಂದನೆ ಸಲ್ಲಿಸಿದ್ದಾರೆ.


