ಮೂಡುಬಿದಿರೆ: ಎಪ್ರಿಲ್ ಒಂದರಿಂದ ಇಂದಿರಾಗಾಂಧಿ ಸಂಕೀಣ೯ದ ಸಂಕೀರ್ಣದ ಮುಂಭಾಗ ನಿಲ್ಲುತ್ತಿದ್ದ ಬಸ್ಸುಗಳನ್ನು ತೆರವುಗೊಳಿಸಿ ಇಲ್ಲಿ ಕೇವಲ ಟೈಮಿಂಗ್ಸ್ ಎಡ್ಜೆಸ್ಟ್ ಮೆಂಟ್ಗಾಗಿ ಮಾತ್ರ ಕೆಲವು ಬಸ್ಸುಗಳನ್ನು ನಿಲ್ಲಿಸುವುದೆಂದು ಬಸ್ಸು ಮಾಲಕರು ಸ್ವಯಂ ನಿರ್ಧಾರ ಕೈಗೊಂಡಿದ್ದು ಇದಕ್ಕೆ ವ್ಯಾಪಾರಸ್ಥರು ವಿರೋಧ ವ್ಯಕ್ತ ಪಡಿಸಿದ್ದಾರೆ.
ಮೂಡುಬಿದಿರೆ ಬಸ್ಸು ನಿಲ್ದಾಣದ ವಾಣಿಜ್ಯ ಸಂಕೀರ್ಣ ಎದುರಿನಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಬಸ್ಸಿನವರು ಕಿರಿಕಿರಿಯನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪುರಸಭೆಯಲ್ಲಿ
ಅದೆಷ್ಟು ಬಾರಿ ಮೀಟಿಂಗ್ ಆದರೂ, ಪೊಲೀಸ್ ಸಿಬ್ಬಂದಿಯ ನೇಮಕವಾದರೂ, ವಾಚ್ ಮೆನನ್ನು ನೇಮಿಸಿದರೂ ಯಾವ ಪ್ರಯೋಜನವೂ ಆಗಲಿಲ್ಲ.

ಇಲ್ಲಿ ನಿಲ್ಲಬೇಕಾದ ಕೆಲವು ಬಸ್ಸುಗಳ ನಿಲುಗಡೆ ಇಲ್ಲ. ಕೆಲವೇ ಬಸ್ಸುಗಳ ನಿಲುಗಡೆಯಾದರೂ ಇತರ ವಾಹನಗಳ ಪಾರ್ಕಿಂಗ್ ಕಿರಿಕಿರಿ. ಹಾಗಾಗಿ ಅಂಗಡಿಗಳಿಗೆ ಹೋಗಬೇಕಾದ ಗ್ರಾಹಕರಿಗೂ ಗೊಂದಲ. ಈ ಗೊಂದಲದಿಂದಾಗಿ ಗ್ರಾಹಕರು ಅಂಗಡಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಂಗಡಿಗಳಿಗೆ ಗ್ರಾಹಕರು ಹೋಗದೆ ವ್ಯಾಪಾರವಾದರೂ ಹೇಗೆ ಸಾಧ್ಯ ?
ತಿಂಗಳಿಗೆ ದುಬಾರಿ ಬಾಡಿಗೆ ಕಟ್ಟಬೇಕು. ಈ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳವರು ತಿಂಗಳಿಗೆ ಒಟ್ಟು 4,35,381 ರೂ. ಬಾಡಿಗೆ ಕಟ್ಟುತ್ತಾರೆ. ಇಷ್ಟು ದೊಡ್ಡ ಬಾಡಿಗೆ ಪುರಸಭೆಗೆ ಹೋಗುತ್ತಿದ್ದರೂ ಅಂಗಡಿಯವರಿಗೆ ಅನ್ಯಾಯವಾದರೆ ಹೇಗೆ ?
ಈ ಮಧ್ಯೆ ಬಸ್ಸಿನವರ ಏಕಾಏಕಿ ನಿಧಾ೯ರದಿಂದ ಈ ಸಂಕೀರ್ಣದ ಎದುರು ಬರುವ ಜನರ ಸಂಖ್ಯೆ ಮತ್ತೂ ಕಡಿಮೆಯಾಗುತ್ತದೆ.
ಆದರೆ ಬಸ್ಸು ಮಾಲಕರಿಗೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆಯಾ? ಅಥವಾ ಪುರಸಭೆಗಾ? ಎನ್ನುವುದು ಇಲ್ಲಿನ ಅಂಗಡಿ ಮಾಲಕರ ಪ್ರಶ್ನೆಯಾಗಿದೆ. ಇದೇ ಪ್ರಶ್ನೆಯನ್ನಿಟ್ಟುಕೊಂಡು ತಮಗಾದ ಅನ್ಯಾಯ, ಸಮಸ್ಯೆಗಳನ್ನು ಪರಿಹರಿಸಿಕೊಡಬೇಕೆಂದು ಅಂಗಡಿ ಮಾಲಕರು ಮತ್ತೊಮ್ಮೆ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ.
ಕೆಲವೊಮ್ಮೆ ಈ ದ್ವಿಚಕ್ರ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್, ಕಾರು ಮತ್ತು ಇತರ ವಾಹನಗಳ ಕಿರಿಕಿರಿಯಿಂದಾಗಿ ಕೆಲವು ಬಸ್ಸುಗಳು ಕ್ರಾಸ್ ಆಗಿ ನಿಲ್ಲುವಂತಹ ಪರಿಸ್ಥಿತಿ ಈ ಎಲ್ಲಾ ಸಮಸ್ಯೆಗಳ ಕುರಿತು ಈ ವಾಣಿಜ್ಯ ಸಂಕೀರ್ಣದ ವ್ಯಾಪಾರಸ್ಥರು ಪುರಸಭೆಯವರಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ ಯಾವ ಪ್ರಯೋಜನವೂ ಆಗಿರಲಿಲ್ಲ.


