ಉಡುಪಿ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೆರಂಜೆಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಗಂಡು ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟಿದೆ.
ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪ್ರಶಾಂತ್ ಹಾಗೂ ಗೃಹಿಣಿ ಸುಚಿತ್ರಾ ದಂಪತಿಯ ಪುತ್ರ ಈ ದುರಂತಕ್ಕೆ ಬಲಿಯಾಗಿದ್ದಾನೆ.

ಮಂಗಳವಾರ ಸುಚಿತ್ರಾ ಅವರು ತಮ್ಮ 6 ವರ್ಷದ ಮಗಳನ್ನು ಶಾಲೆಗೆ ಬಿಡಲು ಹೊರಟ ವೇಳೆ, ಮಳೆ ನಿಂತಿದ್ದ ಕಾರಣ ಚಿಕ್ಕ ಮಗುವನ್ನೂ ಕಂಕುಳಲ್ಲಿ ಎತ್ತಿಕೊಂಡು ಮನೆ ಬಿಟ್ಟು ಹೊರಟಿದ್ದರು. ಈ ವೇಳೆ ದಾರಿ ಬದಿಯ ತೋಟದಲ್ಲಿದ್ದ ತೆಂಗಿನ ಮರದಿಂದ ಅಚಾನಕ್ವಾಗಿ ತೆಂಗಿನಕಾಯಿಯೊಂದು ಬಿದ್ದು ಮಗುವಿನ ತಲೆಗೆ ನೇರವಾಗಿ ಅಪ್ಪಳಿಸಿದೆ.
ಘಟನೆಯಿಂದ ಮಗುವಿನ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರ ನೆರವಿನಿಂದ ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಂಜೆಯ ವೇಳೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.


