
ಕಬಕ, ಜೂನ್ 14: ಯುವ ನ್ಯಾಯವಾದಿಯೊಬ್ಬರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಆರೋಪದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಗಂಭೀರ ಸೆಕ್ಷನ್ಗಳಡಿ ಎಫ್ಐಆರ್ ದಾಖಲಾಗಿರುವ ಘಟನೆ ಕಬಕ ಸಮೀಪದ ವಿದ್ಯಾಪುರದಲ್ಲಿ ನಡೆದಿದೆ.
ವಿದ್ಯಾಪುರ ನಿವಾಸಿ ಹಾಗೂ ಯುವ ನ್ಯಾಯವಾದಿ ಆಶಿಕ್ ಅವರು ನೀಡಿದ ದೂರಿನ ಮೇರೆಗೆ ಶಿವಕುಮಾರ್, ರಾಣಿ ಹಾಗೂ ಯಶೋಧಾ ವಿರುದ್ಧ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಜೂನ್ 14ರಂದು ಬೆಳಿಗ್ಗೆ ಸುಮಾರು 8.55 ಗಂಟೆಗೆ ನಡೆದ ಘಟನೆಯಲ್ಲಿ ಆರೋಪಿಗಳು ಏಕಾಏಕಿ ಜಗಳಕ್ಕೆ ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಗಾಯಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ನ್ಯಾಯವಾದಿ ಆಶಿಕ್ ಅವರು ಪ್ರಸ್ತುತ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಬಗ್ಗೆ ವಕೀಲ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಸೌಮ್ಯ ಸ್ವಭಾವದ ಹಾಗೂ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಯುವ ವಕೀಲ ಆಶಿಕ್ ಅವರ ಮೇಲೆ ನಡೆದಿರುವ ಹಲ್ಲೆ ವಕೀಲರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆಶಿಕ್ ಅವರ ಆರೋಗ್ಯ ವಿಚಾರಿಸಲು ಹಾಗೂ ಬೆಂಬಲ ಸೂಚಿಸಲು ವಿವಿಧ ಭಾಗಗಳಿಂದ ವಕೀಲರು ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ. ಯುವ ನ್ಯಾಯವಾದಿಯ ಮೇಲೆ ನಡೆದಿರುವ ಈ ಘಟನೆಗೆ ವಕೀಲ ಸಮುದಾಯ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 329(3), 352, 115(2), 118(1), 351(2), 74, 109 ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.


