ಮೂಡುಬಿದಿರೆ : ಪರಿವರ್ತನಾಶೀಲವಾದ ಪ್ರಪಂಚದಲ್ಲಿ ಶಿಸ್ತು ಹಾಗೂ ಕ್ರೀಡೆ ಸದಾ ಸ್ಫೂರ್ತಿಯನ್ನು ತುಂಬುತ್ತದೆ. ವಿದ್ಯಾರ್ಥಿ ಜೀವನ ಭಾವನಾ ಸಾಮ್ರಾಜ್ಯದ ಪರ್ವಕಾಲ. ಈ ಸಮಯವನ್ನು ಪಠ್ಯದ ಜೊತೆಗೆ ಪಠ್ಯೇತರ, ಕ್ರೀಡೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪರಿಸರ ಪ್ರಜ್ಞೆ, ರಾಷ್ಟ್ರೀಯತೆಯ ಚಿಂತನೆಗಳೊಂದಿಗೆ ರೂಪುಗೊಳಿಸಿದರೆ ಪ್ರತಿಯೊಂದು ವಿದ್ಯಾರ್ಥಿಯೂ ದೇಶದ ಸಂಪತ್ತಾಗುತ್ತಾರೆ ವ್ಯಕ್ತಿಗಿಂತ ರಾಷ್ಟ್ರ ಮುಖ್ಯ. ಪರಿಸರ ಪ್ರೀತಿ ಜೀವನ ಪ್ರೀತಿಯಾಗಲಿ ಪ್ರತಿಯೊಬ್ಬರೂ ಒಂದು ಗಿಡ ನೆಡುವ ಮೂಲಕ ಈ ನೆಲದ ಋಣ ಸಂದಾಯ ಮಾಡೋಣ. ಈ ನೆಲದ ಕಣಕಣದಲ್ಲೂ ಚೈತನ್ಯ ಅಂತರಾಮಿಯಾಗಿದೆ. ಅದರಲ್ಲಿ ಹಸಿರನ್ನು ಬೆಳೆಸಿ ಪ್ರಗತಿ ಕಾಣುವ ಎಂದು ಮೂಡುಬಿದಿರೆ ಆರಣ್ಯ ವಲಯಾಧಿಕಾರಿ ಕಿರಣ್ ಕುಮಾರ್ ಹೇಳಿದರು.

ಅವರು ಮೂಡುಬಿದಿರೆ ಕಲ್ಲಬೆಟ್ಟು ಎಕ್ಸಲೆಂಟ್ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣ ಮಾಡಿ ಹೇಳಿದರು. ಜ್ಯೋತಿ ಬೆಳಗಿಸಿದ ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಗ್ರಾಂಡ್ ಮಾಸ್ಟರ್ ಇಶಾ ಶರ್ಮ ಕ್ರೀಡೆ ದೇಹವನ್ನು ಬಲಪಡಿಸಿದಂತೆ ಮನಸ್ಸನ್ನು ಸಂತುಲಗೊಳಿಸಿ ಸಮತೋಲನಗೊಳಿಸುತ್ತದೆ. ವ್ಯಕ್ತಿಯ ಯೋಚನಾ ಮತ್ತು ಗ್ರಹಿಕಾ ಕೌಶಲ ವೃದ್ಧಿಸುತ್ತದೆ. ದೇಹ ಮತ್ತು ಮನಸ್ಸನ್ನು ಸಂತೋಷಗೊಳಿಸುವ ಕ್ರೀಡೆ ನಮ್ಮನ್ನು ಎತ್ತರಕ್ಕೆ ಒಯ್ಯಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಬದುಕಿನಲ್ಲಿ ಹೆಜ್ಜೆ ಇಡುವುದು ಅಂದರೆ ನಿರ್ಧಾರ ತೆಗೆದುಕೊಳ್ಳುವುದು ಆಗತ್ಯ, ಜೀವನ ಎನ್ನುವುದು ಚದುರಂಗ ಆಟದಂತೆ ನಮ್ಮದು ಸಿಂಹ ಚೇತನದ ಗತಿಗಮನ ಆಗಬೇಕು. ನಮ್ಮ ಸಂಸ್ಥೆ ಕ್ರೀಡೆಯ ಎಲ್ಲಾ ವಿಭಾಗಗಳಿಗೂ ಸರ್ವ ರೀತಿಯ ಪ್ರೋತ್ಸಾಹ ನೀಡುತ್ತಿದೆ. ಬದುಕಿನ ಯಶಸ್ಸಿಗೆ ಇವತ್ತಿನ ಕ್ರೀಡೆಯ ಸ್ಫೂರ್ತಿ ನಿಮಗೆ ಪಾಠವಾಗಲಿ ಎಂದರು. ವೇದಿಕೆಯಲ್ಲಿ ಸಂಸ್ಥೆಯ ಕಾವ್ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಆಡಳಿತಾಧಿಕಾರಿ ಡಾ.ಬಿ.ಪಿ. ಸಂಪತ್ ಕುಮಾರ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಸಿಬಿಎಸ್ಇ ಪ್ರಾಂಶುಪಾಲರಾದ ಶ್ರೀಪ್ರಸಾದ್ ಉಪಸ್ಥಿತರಿದ್ದರು.
ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಎನ್.ಎಸ್.ಎಸ್, ಎನ್.ಸಿ.ಸಿ, ರೋವರ್ಸ್ ರೇಂಜರ್ಸ್, ನೇವಿ,ಸೌಟ್ಸ್ ಮತ್ತು ಗೈಡ್ಸ್ ರೆಡ್ ಕ್ರಾಸ್ ಘಟಕದ ವತಿಯಿಂದ ಆಕರ್ಷಕ ಪಥ ಸಂಚಲನ, ಕವಾಯತು ನಡೆಯಿತು. ಕುಮಾರಿ ವಿದ್ಯೆಯೀ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಪ ಪ್ರಾಚಾರ ಜಯಶೀಲ್ ಸ್ವಾಗತಿಸಿ ಶಿಕ್ಷಕ ಚಂದ್ರಪ್ಪ ವಂದಿಸಿದರು.ಆಂಗ್ಲಭಾಷಾ ಉಪನ್ಯಾಸಕ ವಿಕ್ರಮ್ ನಾಯಕ್ ಕಾಠ್ಯಕ್ರಮ ನಿರೂಪಿಸಿದರು.


