ಮಂಗಳೂರು, ಎ.25: ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಬಾಲಕನನ್ನು 16 ವರ್ಷದ ಹುಡುಗ ರಕ್ಷಿಸಿದ ಘಟನೆ ಶುಕ್ರವಾರ ಸಂಜೆ ಉಳ್ಳಾಲದ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶುಕ್ರವಾರ ಸಂಜೆ ಪಾಲಕರ ಜೊತೆ ಸೋಮೇಶ್ವರ ಕಡಲ ಕಿನಾರಕ್ಕೆ ಬಂದಿದ್ದ ವಿಟ್ಲ ಮೇಗಿನಪೇಟೆಯ ಮುಹಮ್ಮದ್ ಅರ್ಷಮನ್(10) ಎಂಬ ಬಾಲಕ ಸಮುದ್ರದ ಅಲೆಗಳ ಸುಳಿಗೆ ಸಿಲುಕಿದ್ದ. ಅದನ್ನು ತಕ್ಷಣ ಗಮನಿಸಿದ ಮುಡಿಪು ಸಮೀಪದ ಅಶ್ರಫ್ ಎಂಬವರ ಪುತ್ರ ಮುಹಮ್ಮದ್ ಇಸ್ಮಾಯೀಲ್ ಫಾಯಿಝ್(16) ಎಂಬಾತ ತಕ್ಷಣ ತನ್ನ ಜೀವದ ಹಂಗು ತೊರೆದು ಸಮುದ್ರಕ್ಕೆ ಹಾರಿ 10 ನಿಮಿಷಗಳ ಕಾಲ ಹೋರಾಟ ನಡೆಸಿ ಬಾಲಕನನ್ನು ರಕ್ಷಿಸಿದ್ದಾನೆ ಎಂದು ತಿಳಿದುಬಂದಿದೆ.

ರಕ್ಷಣೆಯ ವೇಳೆ ಸುಸ್ತಾಗಿದ್ದ ಫಾಯಿಝ್ ಕೂಡ ಅಸ್ವಸ್ಥಗೊಂಡು ಮೂರ್ಛೆ ಹೋಗಿದ್ದ. ತಕ್ಷಣ ಆತನನ್ನು ಮನೆಮಂದಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ಅರ್ಷಮನ್ ಕೂಡ ಅಪಾಯದಿಂದ ಪಾರಾಗಿದ್ದಾನೆ.
ಮುಡಿಪು ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಇಸ್ಮಾಯಿಲ್ ಫಾಯಿಝ್ ಇತ್ತೀಚೆಗೆ ಪ್ರಕಟಗೊಂಡ ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ 509 ಅಂಕಗಳೊಂದಿಗೆ ಉತ್ತೀರ್ಣನಾಗಿದ್ದ. ಕರ್ನಾಟಕ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೂಡ ಈತ ದ್ವಿತೀಯ ಸ್ಥಾನಿಯಾಗಿದ್ದಾನೆ. ಈತನ ಧೈರ್ಯ-ಸಾಹಸಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಅರ್ಷಮನ್ ಮತ್ತು ಫಾಯಿಝ್ ಹತ್ತಿರದ ಸಂಬಂಧಿಗಳಾಗಿದ್ದು, ಶುಕ್ರವಾರ ಎರಡೂ ಕುಟುಂಬದ ಸದಸ್ಯರು ಜೊತೆಯಾಗಿ ಸೋಮೇಶ್ವರ ಕಡಲ ತೀರಕ್ಕೆ ವಿಹರಿಸಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ.
‘‘ತನಗೆ ಈಜಾಡಲು ಗೊತ್ತು. ಆ ಧೈರ್ಯದಿಂದಲೇ ತಾನು ಅರ್ಷಮನ್ನನ್ನು ರಕ್ಷಿಸಲು ಮುಂದಾದೆ. 10 ನಿಮಿಷಗಳ ಕಾಲ ತಾನು ಆತನ ರಕ್ಷಣೆಗಾಗಿ ಪ್ರಯತ್ನಿಸಿದೆ. ಮಾಹಿತಿ ತಿಳಿದ ಸ್ಥಳೀಯ ಈಜುಗಾರರು ಕೂಡ ಅರ್ಷಮನ್ನ ರಕ್ಷಣೆಗಾಗಿ ಸಹಕರಿಸಿದರು’’ ಎಂದು ಇಸ್ಮಾಯೀಲ್ ಫಾಯಿಝ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾನೆ.


