ಕೊಂಕಣ ರೈಲ್ವೆ ನಷ್ಟದಲ್ಲಿದೆ ವಿಲೀನಗೊಳಿಸುವುದೇ ಸೂಕ್ತ ಪರಿಹಾರ: ಬ್ರಿಜೇಶ್ ಚೌಟ
ಮೂಲ್ಕಿ: ಹಣಕಾಸಿನ ಮುಗ್ಗಟ್ಟಿನೊಂದಿಗೆ ನಷ್ಟದಲ್ಲಿರುವ ಕೊಂಕಣ ರೈಲ್ವೆಯನ್ನು ಸೆಂಟ್ರಲ್ ರೈಲ್ವೆಯೊಂದಿಗೆ ವಿಲೀನಗೊಳಿಸಬೇಕೆಂದು ಆಗ್ರಹಿಸಲಾಗಿದೆ, ಈಗಾಗಲೇ ಗೋವಾ, ಕೇರಳ ಸರ್ಕಾರ ಸಮ್ಮತಿ ಸೂಚಿಸಿದ್ದು, ಮಹಾರಾಷ್ಟ್ರ, ಕರ್ನಾಟಕ ಸರ್ಕಾರಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

ಅವರು ಮೂಲ್ಕಿ ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದರು.ಫ್ಲಾಟ್ ಫಾರಂ ಒಂದಕ್ಕೆ 2 ಕೋಟಿ ವೆಚ್ಚದಲ್ಲಿ ಶೆಲ್ಟರ್ ಹಾಗೂ ನೆಲಹಾಸನ್ನು ನಿರ್ಮಿಸಲಾಗಿದೆ. ಫ್ಲಾಟ್ ಫಾರ್ಮ್ 2 ರನ್ನು ಹೊಸದಾಗಿ 2.40 ಕೋ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 19 ಲಕ್ಷ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಸಂಪರ್ಕ ರಸ್ತೆಯನ್ನು ಡಾಮರೀಕರಣ ಗೊಳಿಸಲಾಗಿದೆ. ಪ್ರಯಾಣಿಕರು ಸಂಪರ್ಕಿಸುವ ಫುಟ್ ಓವರ್ ಬ್ರಿಡ್ಜನ್ನು 2 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಕಾಮಗಾರಿಯ ಬಗ್ಗೆ ಸಾಕಷ್ಟು ಅಸಮಾಧಾನವಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆ ಒಂದಕ್ಕೆ ಸಂಸದರು ಉತ್ತರಿಸಿದರು. ಜಿಲ್ಲೆಯಲ್ಲಿ ಹಲವಾರು ಕಡೆ ಕೆಲವೊಂದು ರೈಲ್ವೆ ನಿಲುಗಡೆಯ ಆಗ್ರಹ ಇದೆ ಮಡ್ಗಾವ್ ನಿಂದ ಮಂಗಳೂರಿನವರೆಗೆ ದ್ವಿಪಥ ಹಳಿಯನ್ನು ಮಾಡಿದಲ್ಲಿ ಇದು ಸಾಧ್ಯವಾಗಲಿದೆ ಈ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ಹಳೆಯಂಗಡಿ ರೈಲ್ವೆ ಕ್ರಾಸಿಂಗ್ನನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಜಾಗದ ಅವ್ಯವಸ್ಥೆಯಿಂದ ಅದುಕುಂಠಿತಗೊಂಡಿದೆ. ಕಲ್ಲಾಪು ಹಳೆಯಂಗಡಿ ರೈಲ್ವೆ ಗೇಟ್ ನಡುವೆ ಬ್ರಿಡ್ಜ್ ನಿರ್ಮಿಸುವ ಯೋಜನೆಯನ್ನು ಕೈ ಬಿಡಲಾಗಿದೆ. ಲೋಕೋಪಯೋಗಿ ಇಲಾಖೆಯ ಮೂಲಕ ಜಮೀನು ಹಸ್ತಾಂತರಗೊಂಡಲ್ಲಿ ಹಳೆಯಂಗಡಿಯಲ್ಲಿ ಯೋಜನೆ ರೂಪಿತ ಗೊಳ್ಳಲಿದೆ ಎಂದು ಸಂಸದರು ಮಾಹಿತಿ ನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಕೆಲವೊಂದು ಸಲಹೆಗಳನ್ನು ನೀಡಿದರು.ಭುವನಾಭಿರಾಮ ಉಡುಪ, ಸುನಿಲ್ ಆಳ್ವ, ಈಶ್ವರ ಕಟೀಲು, ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಪುತ್ರನ್, ಶೈಲೇಶ್ ಕುಮಾರ್, ಸತೀಶ್ ಅಂಚನ್, ವಿಠಲ್ ಕುಮಾರ್, ರಂಗನಾಥ ಶೆಟ್ಟಿ, ಸಾಧು ಅಂಚನ್, ರವೀಶ್ ಕಾಮತ್, ಜೀವನ್ ಶೆಟ್ಟಿ, ನವೀನ್ ರಾಜ್ ಬಪ್ಪನಾಡು, ಸುಭಾಷ್ ಶೆಟ್ಟಿ ಮತ್ತಿತರರು ಜೊತೆಯಲ್ಲಿದ್ದರು.
…ಕಾಮಗಾರಿಯಿಂದ ಅಸಮಾಧಾನ…
ರೈಲ್ವೆ ನಿಲ್ದಾಣದ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮಳೆಗಾಲದಲ್ಲಿ ಡಾಮರೀಕರಣ ನಡೆಸಿದ್ದರಿಂದ ಹಾಗೂ ಹೊಸದಾಗಿ ನಿರ್ಮಿಸಲಾಗಿರುವ ಶೆಲ್ಟರ್ ಗಳು ಸೋರುತ್ತಿರುವುದು ಗಿಡಗಂಟಿಗಳು ರೈಲ್ವೆ ನಿಲ್ದಾಣವನ್ನು ಅಕ್ರಮಿಸಿಕೊಂಡಿರುವ ಬಗ್ಗೆ ಸಂಸದರು, ಶಾಸಕರು ಅಸಮಾಧಾನಗೊಂಡು ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು.ಮುಂದಿನ ಹತ್ತು ದಿನದಲ್ಲಿ ಈ ಸಮಸ್ಯೆಗಳು ಪರಿಹಾರವಾಗಬೇಕು ಸ್ಥಳೀಯ ನಿಯೋಗವು ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದರು.


