ಮಂಗಳೂರು: ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ಹಾಗೂ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರ್ಪಡೆಯಾಗಿರುವುದಕ್ಕೆ ಸಾಮಾಜಿಕ ಕಾರ್ಯಕರ್ತ ಡಾ.ಅಬ್ದುಲ್ ಶಕೀಲ್ ತೀವ್ರ ಆಕ್ರೋಶ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಡಾ. ಅಬ್ದುಲ್ ಶಕೀಲ್, ರಾಘವ್ ಚಡ್ಡಾ ಅವರನ್ನು “ಸ್ವಾರ್ಥಿ ರಾಜಕಾರಣಿ” ಎಂದು ಟೀಕಿಸಿದ್ದಾರೆ. “ರಾಘವ್ ಚಡ್ಡಾ ಅವರು ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದ ರೀತಿ ಮತ್ತು ಅವರ ವಿಚಾರಧಾರೆಗಳನ್ನು ನೋಡಿ ನಾವು ಹೆಮ್ಮೆ ಪಡುತ್ತಿದ್ದೆವು. ನಾನು ಕಾಂಗ್ರೆಸ್ ಪಕ್ಷದವನಾಗಿದ್ದರೂ ಅವರೊಬ್ಬ ‘ಜನರಲ್ ಜೆನ್ ಝಡ್’ ನಾಯಕ ಎಂದು ಅಭಿಮಾನಿಯಾಗಿದ್ದೆ. ಆದರೆ ಅವರ ಈ ದಿಢೀರ್ ನಿರ್ಧಾರ ನಮಗೆಲ್ಲ ದೊಡ್ಡ ಆಘಾತ ತಂದಿದೆ,” ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷವು ಅಲ್ಪಸಂಖ್ಯಾತರ ವಿರುದ್ಧ ಹಗೆತನ ಹೊಂದಿರುವ ಸಿದ್ಧಾಂತವನ್ನು ಪಾಲಿಸುತ್ತಿದೆ ಎಂದು ಆರೋಪಿಸಿರುವ ಡಾ. ಶಕೀಲ್, “ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅವಹೇಳನ ಕಾರಿಯಾಗಿ ಮಾತನಾಡುವ ಸಿದ್ಧಾಂತ ಹೊಂದಿರುವ ಪಕ್ಷದ ಜೊತೆ ರಾಘವ್ ಚಡ್ಡಾ ಹೇಗೆ ಕೈಜೋಡಿಸಲು ಸಾಧ್ಯ? ಈ ಹಿಂದೆ ಅವರ ವಿಚಾರಧಾರೆಗಳು ಈಗ ಎಲ್ಲಿ ಹೋದವು?” ಎಂದು ಪ್ರಶ್ನಿಸಿದ್ದಾರೆ.
“ಒಂದು ಗಂಟೆಯ ಹಿಂದಿನವರೆಗೂ ನಾನು ಅವರ ಅಭಿಮಾನಿಯಾಗಿದ್ದೆ. ಆದರೆ ಈಗ ಅವರ ನಿರ್ಧಾರದಿಂದಾಗಿ ಅವರ ಅಭಿಮಾನಿಯಾಗಿದ್ದಕ್ಕೆ ವಿಷಾದಿಸುತ್ತಿದ್ದೇನೆ. ಇದು ಅವರ ರಾಜಕೀಯ ಮಹತ್ವಾಕಾಂಕ್ಷೆಯ ಪರಮಾವಧಿಯಾಗಿದ್ದು, ತಮ್ಮ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ,” ಎಂದು ಅವರು ಕಿಡಿಕಾರಿದ್ದಾರೆ.
ರಾಘವ್ ಚಡ್ಡಾ ಅವರ ಈ ನಡೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.


