ಉಳ್ಳಾಲ: ಜೂ:19: ವಿದ್ಯುತ್ ಆಘಾತಕ್ಕೊಳಗಾಗಿ ಹೆಣ್ಣು ನವಿಲೊಂದು ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಮುಂಜಾನೆ ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮಿ ಮಂದಿರದ ಬಳಿ ನಡೆದಿದೆ.ಪಿಲಾರು ಮಹಾಲಕ್ಷ್ಮಿ ಮಂದಿರದ ಬಳಿಯ ವಿದ್ಯುತ್ ಕಂಬದ ತಂತಿಯಲ್ಲಿ ಕುಳಿತ ಹೆಣ್ಣು ನವಿಲಿಗೆ ವಿದ್ಯುತ್ ಪ್ರವಹಿಸಿ ಕೆಳಗೆಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದೆ.

ನವಿಲು ಸಾವನ್ನಪ್ಪಿರುವುದನ್ನು ಕಂಡ ಸ್ಥಳೀಯರಾದ ಶೈಲೇಶ್ ಗಟ್ಟಿಯವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕೋಟೆಕಾರು ಉಪವಲಯ ಅರಣ್ಯ ಪಾಲಕರಾದ ರೋಹಿತ್ ಕುಮಾರ್ ಅವರು ನವಿಲಿನ ಕಳೇಬರವನ್ನು ವಿಲೇವಾರಿ ಮಾಡಿದ್ದಾರೆ. ಇತ್ತೀಚಿಗೆ ಅಪಾರ ಸಂಖ್ಯೆಯ ನವಿಲುಗಳು ಆಹಾರ ಅರಸಿ ಕಾಡನ್ನ ಬಿಟ್ಟು ಸಮುದ್ರ ತೀರ ಹಾಗೂ ಜನನಿಬೀಡ ಪ್ರದೇಶಗಳಿಗೆ ಲಗ್ಗೆ ಇಟ್ಟಿದ್ದು,ವಿದ್ಯುತ್ ಕಂಬಗಳ ತಂತಿಗಳಿಂದ ಪ್ರಾಣಾಪಾಯ ಎದುರಿಸುತ್ತಿವೆ.



