ಪಶ್ಚಿಮ ಏಷ್ಯಾದಲ್ಲಿ ಯುದ್ಧ ಹರಡುವ ಕ್ರಮವನ್ನು ಸಮರ್ಥಿಸಲಾಗದು

ಕೋಝಿಕ್ಕೋಡ್: ಫೆಲೆಸ್ತೀನ್-ಇಸ್ರೇಲ್ ದ್ವಿರಾಷ್ಟ್ರ ಪರಿಹಾರವನ್ನು ಸೂಚಿಸುವ ಯುಎನ್ ಸಾಮಾನ್ಯ ಸಭೆಯ ನಿರ್ಣಯವನ್ನು ಬೆಂಬಲಿಸಿದ ಭಾರತದ ನಿಲುವು ಶ್ಲಾಘನೀಯವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು. ಪ್ರವಾದಿ ಜನ್ಮದಿನಾಚರಣೆಯ ಅಂಗವಾಗಿ ಮರ್ಕಝ್ ಆಶ್ರಯದಲ್ಲಿ ಕೋಝಿಕ್ಕೋಡ್ನಲ್ಲಿ ನಡೆದ ಅಂತರಾಷ್ಟ್ರೀಯ ಮೀಲಾದ್ ಸಮ್ಮೇಳನದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
ಯುದ್ಧದ ಸಂಕಷ್ಟದಲ್ಲಿ ಎಲ್ಲವನ್ನೂ ಕಳೆದುಕೊಂಡ ಜನರೊಂದಿಗೆ ನಿಲ್ಲಲು ಇಡೀ ಜಗತ್ತು ಮುಂದೆ ಬರಬೇಕು. ಗಾಝಾ ಜೊತೆಗೆ ಕತಾರ್, ಯೆಮೆನ್ ಮತ್ತು ಲೆಬನಾನ್ ಸೇರಿದಂತೆ ಪಶ್ಚಿಮ ಏಷ್ಯಾದ ದೇಶಗಳಲ್ಲಿ ಅಶಾಂತಿಯನ್ನು ಹರಡುತ್ತಿರುವ ಇಸ್ರೇಲ್ನ ಕ್ರಮವನ್ನು ಎಂದಿಗೂ ಸಮರ್ಥಿಸಲಾಗದು. ಲಕ್ಷಾಂತರ ವಲಸಿಗರು ಕೆಲಸ ಮಾಡುವ ಈ ವಲಯದಲ್ಲಿನ ಅಸ್ಥಿರತೆಯನ್ನು ಪರಿಗಣಿಸಿ, ಶಾಂತಿಯನ್ನು ಪುನಃಸ್ಥಾಪಿಸಲು ಸರ್ಕಾರವು ಮುಂದಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಭಾರತಕ್ಕಿರುವ ಪ್ರಭಾವವು ಶಾಂತಿ ಪ್ರಯತ್ನಗಳನ್ನು ತ್ವರಿತಗೊಳಿಸುತ್ತದೆ ಎಂದು ಗ್ರ್ಯಾಂಡ್ ಮುಫ್ತಿ ಹೇಳಿದರು.


