
ಮುಂಬಯಿ, ಸೆ.14 : ಅಂತರರಾಷ್ಟ್ರೀಯ ಸ್ನೇಹ, ಶಾಂತಿ ಮತ್ತು ಸಾಂಸ್ಕೃತಿಕ ವಿನಿಮಯದ ಸಂಕೇತವಾಗಿ, ೫೧ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ ಹಾಗೂ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವು ಶನಿವಾರ (ಸೆ.13) ಥೈಲ್ಯಾಂರ್ ರಾಷ್ಟ್ರದ ಬ್ಯಾಂಕಾಕ್ ನಗರದ ಹಾಲಿಡೇ ಇನ್ ಇದರ ಎಮರಾಲ್ಡ್ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಭವ್ಯವಾಗಿ ನಡೆಯಿತು.
ಇಂಡೋ ತಾಯ್ ಫ್ರೆಂಡ್ಶಿಪ್ ಕ್ಲಬ್, ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್, ಅಂತರರಾಷ್ಟ್ರೀಯ ಸಾಂಸ್ಕೃತಿಕ ಸಡಗರ ಪರಿಷತ್ತು ಭಾರತ ಹಾಗೂ ಜೆನೆಸಿಸ್ ಅಲ್ಟಿಮಾ, ದುಬೈ (ಯುಎಇ) ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರ ಪುಣ್ಯಕ್ಷೇತ್ರದ ಪರಮ ಪೂಜ್ಯ ಡಾ| ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.
ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಏಷಿಯಾ ಖಂಡದ ಬಹು ಭಾಗದಲ್ಲಿ ಬೌದ್ಧ ಧರ್ಮೀಯರು ಅತ್ಯಂತ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಇದು ಭಗವಾನ್ ಬುದ್ಧನ ಶಾಂತಿ ಸಂದೇಶದ ಬಹುದೊಡ್ಡ ಕೊಡುಗೆ. ಸೌಹಾರ್ದತೆಯಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿದೆ. ಥೈಲ್ಯಾಂಡ್ನ ಜನ ಜೀವನವನ್ನು ಅವಲೋಕಿಸಿದಾಗ ಅಕ್ಷರಶಃ ನಿಜವೆನಿಸುತ್ತದೆ ಎಂದರು.
ಆಂಧ್ರಪ್ರದೇಶದ ಜಂಗಮರ ಹೊಸಹಳ್ಳಿಯ ಅಜಾತ ಶಂಭಿಲಿಂಗ ಶಿವಾಚಾರ್ಯ ಸ್ವಾಮೀಜಿ ಆಧ್ಯಾತ್ಮಿಕ ಭಾಷಣ ಮಾಡಿದ್ದು ಬ್ಯಾಂಕಾಕ್ನ ಪಾಲ್ ನರೋಲ್ ಅಕಾಡೆಮಿ ಅಧ್ಯಕ್ಷ ಅಜಾರ್ನ್ ಪಾಲ್ ನರೋಲ್, ಬ್ಯಾಂಕಾಕ್ನ ಮಾನವ ಹಕ್ಕುಗಳ ಹಿತರಕ್ಷಣ ಕಾರ್ಯಕರ್ತ ಚಿನ್ಮೌಂಗ್ ಮಾಂಗ್ ಕೊಟ್ರ್ ಅಕ್ಕರಾನಂತಚಿನ್, ಜಪಾನ್ನ ಟಿಎಂಡಿ ಸಿಇಓ ಶತೋಷಿ ಇಶಿಲ್, ಪ್ರಬಂಧಕ ನೋಬು ತಕಹಸಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು

ರಾಯಚೂರು ಅಬಕಾರಿ ಗುತ್ತಿಗೆದಾರ ಡಾ| ಇ.ಅಂಜನೇಯ ಅಧ್ಯಕ್ಷತೆ ವಹಿಸಿದ್ದರು. ಅಂತರರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ ಪರಿಷತ್ತ್ನ ಭಾರತದ ಅಧ್ಯಕ್ಷ ಇಂ| ಕೆ.ಪಿ.ಮಂಜುನಾಥ ಸಾಗರ್ ಪ್ರಾಸ್ತಾವಿಕ ಭಾಷಣಗೈದು ನಮ್ಮ ಸಂಘಟನೆ ವಿಶ್ವದಾದ್ಯಂತ ನಾಡು ನುಡಿಯನ್ನು ಪಸರಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ೫೦ಕ್ಕೂ ಹೆಚ್ಚು ದೇಶಗಳಲ್ಲಿ ೧೭ ವಿಶ್ವಕನ್ನಡ ಸಮ್ಮೇಳನ ಮತ್ತು ೫೧ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭಗಳನ್ನು ಆಯೋಜಿಸುವ ಮೂಲಕ ಕರ್ನಾಟಕದ ೫೦೦೦ಕ್ಕೂ ಹೆಚ್ಚು ಕಲಾವಿದರು ಸಂಪನ್ಮೂಲ ವ್ಯಕ್ತಿಗಳಿಗೆ ಅಂತರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಓಮಾನ್ನ ಕನ್ನಡ ಮತ್ತು ಇಂಗ್ಲಿಷ್ ಲೇಖಕ ಎಸ್.ರಂಗನಾಥ್ ರಚಿತ ಬಿಯಾಂಡ್ ದಿ ಹಾರಿಜಾನ್ ಇಂಗ್ಲೀಷ್ ಕೃತಿಯನ್ನು ವಿಜಾಪುರದ ನಾಗು ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ| ಕೆ.ಬಿ.ನಾಗೂರ ಲೋಕಾರ್ಪಣೆಗೊಳಿಸಿ ಕೃತಿಗಳನ್ನು ಓದುವುದು ಮತ್ತು ರಚಿಸುವುದು ಜ್ಞಾನಾರ್ಜನೆಯ ಪ್ರಬಲ ಅಸ್ತ್ರ ಎಂದರು.
ವಿಜಯಪುರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಬ್ಯಾಂಕಾಕ್ನ ಥಾಯ್ ಕನ್ನಡ ಬಳಗದ ಮಾಜಿ ಅಧ್ಯಕ್ಷ ವಿನಯ್ ರೈ, ಜನಿಸಿಸ್ ಅಲ್ಟಿಮಾ ಅಧ್ಯಕ್ಷ ಡಾ| ಎಂ.ಎ.ಮುಮ್ಮಿಗಟ್ಟಿ, ಬೆಳಗಾವಿಯ ಲೇಖಕಿ ಮತ್ತು ಕವಿಯತ್ರಿ ಡಾ| ಅರ್ಚನಾ ಅಥಣಿ, ಸಮಾಜ ಸೇವಕ, ಯುವ ನಾಯಕ ಡಾ| ದೊಡ್ಡಪ್ಪ ಪೂಜಾರಿ ಹುಂಡೆಕಲ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಡಾ| ಈಡಿಗ ಅಂಜನೇಯ, ಇ.ನಾಗಲಕ್ಷ್ಮಿ, ಕೆ.ಡಿ.ಚಂದ್ರಮೌಳಿ, ಎಂ.ಕೆ ಮೃದುಲಾ ದಂಪತಿಗಳಿಗೆ ಗೋಲ್ಡನ್ ಕಪಲ್ ಪ್ರಶಸ್ತಿ ಹಾಗೂ ಡಾ| ಮಹೇಶ್ವರ ಸ್ವಾಮೀಜಿ ಮತ್ತು ಮೈಸೂರ್ ಡಾ| ಪ್ರಶಾಂತ್ ಅವರಿಗೆ ಗೋಲ್ಡನ್ ಐಕಾನಿಕ್ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು .
ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಹಾಸ್ಯ ಕಾರ್ಯಕ್ರಮ, ಕೊಪ್ಪಳದ ಹೈಬ್ರೀಡ್ ನ್ಯೂಸ್ ಸಂಸ್ಥಾಪಕ ಅಧ್ಯಕ್ಷ ಡಾ| ಬಿ.ಎನ್ ಹೊರಪೇಟಿ ಕಾವ್ಯವಾಚನ, ಆರತಿ ಸುರೇಶ್, ಅಮೂಲ್ಯ ಸುಜಿತ್ ಬೆಂಗಳೂರು ತಂಡವು ಶಾಸ್ತ್ರೀಯ ಮತ್ತು ಅರೆ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತ ಪಡಿಸಿದರು.


