ಮಂಗಳೂರು, ಅ.3: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಬ್ಯಾರಿ ಅಧ್ಯಯನ ಪೀಠದಿಂದ ನಗರದ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ ಬ್ಯಾರಿ ಭಾಷಾ ದಿನ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಭಾಷೆಯ ಮೇಲೆ ಅಭಿಮಾನ ಮತ್ತು ಹೆಮ್ಮೆ ಬೇಕು. ಆದರೆ ಅದು ಯಾವತ್ತೂ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು. ಭಾಷೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಸೌಹಾರ್ದ ವಾತಾವರಣ ರೂಪಿಸಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಮಾಜ ಸೇವಕ ಫಾರೂಕ್ ಉಳ್ಳಾಲ್ ಉಪನ್ಯಾಸ ನೀಡಿದರು. ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ಎಸ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಬೆಳವಣಿಗೆಯ ನಿಟ್ಟಿನಲ್ಲಿ ಶ್ರಮಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರುಗಳಾದ ಆಲಿಯಬ್ಬ ಜೋಕಟ್ಟೆ, ಯೂಸುಫ್ ವಕ್ತಾರ್, ಹುಸೈನ್ ಕಾಟಿಪಳ್ಳ ಅವರನ್ನು ಗೌರವಿಸಲಾಯಿತು. ಬ್ಯಾರಿ ಅಧ್ಯಯನ ಪೀಠದ ಸದಸ್ಯ ಬಿ.ಎ. ಮುಹಮ್ಮದ್ ಹನೀಫ್ ಅಭಿನಂದನಾ ಭಾಷಣ ಮಾಡಿದರು.ವೇದಿಕೆಯಲ್ಲಿ ಅಧ್ಯಯನ ಪೀಠದ ಸದಸ್ಯರಾದ ಉಮರ್ ಯು.ಎಚ್., ಬಶೀರ್ ಬೈಕಂಪಾಡಿ, ಖಾಲಿದ್ ತಣ್ಣೀರುಬಾವಿ, ಮೊಯಿದಿನ್ ಬಾದ್ಷಾ ಸಂಬಾರತೋಟ, ಹಂಝ ಮಲಾರ್ ಉಪಸ್ಥಿತರಿದ್ದರು.ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಸ್ಯ ಡಾ.ಎನ್. ಇಸ್ಮಾಯೀಲ್ ವಂದಿಸಿದರು. ವಿದ್ಯಾರ್ಥಿನಿ ಆಯಿಶಾ ನಫೀಹಾ ಕಾರ್ಯಕ್ರಮ ನಿರೂಪಿಸಿದರು.


