– ಬಾರ್ ನಲ್ಲಿ ಪ್ರಾರಂಭವಾದ ಗಲಾಟೆ..!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ನಿನ್ನೆ (ಅ. 23) ರಾತ್ರಿ ಯುವಕನೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ಈ ಸಂಬಂಧ ಬಜರಂಗದಳದ ಕಾರ್ಯಕರ್ತ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳ ವಿರುದ್ಧ ಕೊಲೆ ಯತ್ನ (ಐಪಿಸಿ ಸೆಕ್ಷನ್ 307) ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಘಟನೆಯ ವಿವರ ಹಾಗೂ ಆರೋಪಿಗಳ ಗುರುತು ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಸುರತ್ಕಲ್ನ ದೀಪಕ್ ಬಾರ್ ಬಳಿ ಈ ಘಟನೆ ನಡೆದಿದೆ. ಮುಸ್ಲಿಂ ಯುವಕರಾದ ಮುಕ್ಷಿದ್ ಮತ್ತು ನಿಝಾಮ್ ಹಾಗೂ ಅವರ ಇಬ್ಬರು ಸ್ನೇಹಿತರು ಬಾರ್ಗೆ ಹೋಗಿ ಮದ್ಯಪಾನ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳೊಂದಿಗೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ.
ಬಾರ್ನಿಂದ ಹೊರಗೆ ಬಂದ ನಂತರವೂ ಜಗಳ ಮುಂದುವರೆದಿದ್ದು, ಈ ವೇಳೆ ಒಬ್ಬ ಆರೋಪಿಯು ಫ್ಲೆಕ್ಸಿ ಕತ್ತರಿಸಲು ಬಳಸುವಂತಹ ಚಾಕುವಿನಿಂದ ಮುಕ್ಷಿದ್ ಅವರ ಹೊಟ್ಟೆ ಹಾಗೂ ಕಿವಿಯ ಬಳಿ ಇರಿದಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ನಿಝಾಮ್ ಅವರ ಕೈಗೂ ಗಾಯವಾಗಿದೆ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಕ್ಷಿದ್ ಅವರ ಗಾಯವು ಗಂಭೀರ ಸ್ವರೂಪದ್ದಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ಆರೋಪಿಗಳ ಗುರುತು ಪತ್ತೆ: ನಾಲ್ವರಿಗಾಗಿ ಹುಡುಕಾಟ
ಘಟನೆ ನಡೆದ ತಕ್ಷಣದಿಂದಲೇ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ತಂಡಗಳು, ರಾತ್ರೋರಾತ್ರಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿವೆ. ಆರೋಪಿಗಳನ್ನು ಸುರತ್ಕಲ್ನ ರೌಡಿ ಶೀಟರ್ ಮತ್ತು ಸಕ್ರಿಯ ಬಜರಂಗದಳದ ಕಾರ್ಯಕರ್ತ ಗುರುರಾಜ್, ಆತನ ಸ್ನೇಹಿತ ಅಲೆಕ್ಸ್ ಸಂತೋಷ್ (ಕ್ರಿಶ್ಚಿಯನ್), ಸುಶಾಂತ್ ಮತ್ತು ನಿತಿನ್ ಎಂದು ಗುರುತಿಸಲಾಗಿದೆ.
ಆರೋಪಿಗಳ ಬಂಧನಕ್ಕೆ ಪೊಲೀಸ್ ತಂಡಗಳು ರಾತ್ರಿಯೇ ಅವರ ಅಡಗುತಾಣಕ್ಕೆ ತೆರಳಿದ್ದವು. ಆದರೆ, ಅಷ್ಟರೊಳಗೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. “ಆರೋಪಿಗಳ ಪತ್ತೆಗಾಗಿ ತಂಡಗಳು ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಆಯುಕ್ತರು ತಿಳಿಸಿದ್ದಾರೆ.
ಇಂದು (ಅ. 24) ಬೆಳಗ್ಗೆ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿರುವ ಕಮಿಷನರ್, ಸುರತ್ಕಲ್ ಪಿಎಸ್ನಲ್ಲಿ (ಪೊಲೀಸ್ ಠಾಣೆ) ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.


