ಮೂಡುಬಿದಿರೆ: ಕ್ಯಾನ್ಸರ್ ರೋಗವನ್ನು ಪ್ರಾರಂಭಿಕ ಹಂತದಲ್ಲೆ ಪತ್ತೆ ಹಚ್ಚಿ ಸಕಾಲದಲ್ಲಿ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಾಧ್ಯವಿದೆ. ಇಂತಹ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಮಹಿಳೆಯರಲ್ಲಿ ಕಂಡು ಬರುವ ಕ್ಯಾನ್ಸರ್ ಕಾಯಿಲೆಯ ತಪಾಸಣೆ ಮತ್ತು ಇದರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೆ ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟನ್ನು ಪ್ರಾರಂಭಿಸಲಾಗಿದೆ ಎಂದು ಟ್ರಸ್ಟಿ ಡಾ. ಅಮರಶ್ರೀ ಹೇಳಿದರು.
ಅವರು ಗಾಂಧಿನಗರದ ಧನಲಕ್ಷ್ಮೀ ಕ್ಯಾಶ್ಯೂ ಫ್ಯಾಕ್ಟರಿಯ ಕಾರ್ಮಿಕರಿಗೆ ಕೆ.ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಕ್ಯಾನ್ಸರ್ ತಪಾಸಣಾ ಶಿಬಿರವನ್ನುದ್ದೇಶಿಸಿ ಮಾತನಾಡಿದರು. ಕೆಲವು ರೋಗ ತಪಾಸಣೆಗೆ ದುಬಾರಿ ಖರ್ಚು ಆಗುತ್ತದೆ ಎಂದು ಹೆದರಿ ಬಡವರು ವೈದ್ಯರ ಬಳಿ ಹೋಗಲು ಹಿಂದೇಟು ಹಾಕುತ್ತಾರೆ. ಅಂತವರಿಗೋಸ್ಕರವೇ ನಾವು ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದೇವೆ. ಇದರ ಪ್ರಯೋಜನ ಎಲ್ಲರಿಗು ಸಿಗುವಂತ್ತಾಗಲಿ ಎಂದರು.

ಉದ್ಯಮಿ ಶ್ರೀಪತಿ ಭಟ್ ಮಾತನಾಡಿ ಅಮರನಾಥ ಶೆಟ್ಟಿ ಶಾಸಕರಾಗಿ, ಮಂತ್ರಿಯಾಗಿ ಜನ ನೆನಪಿಡುವಂತಹ ಸೇವೆಯನ್ನು ಮಾಡಿದ್ದಾರೆ. ಅವರ ಹೆಸರಿನಲ್ಲಿ ಪುತ್ರಿ ಅಮರಶ್ರೀ ಟ್ರಸ್ಟ್ ಆರಂಭಿಸಿ ಆರೋಗ್ಯ ಸೇವೆಯನ್ನು ಜನರಿಗೆ ನೀಡುತ್ತಿರುವುದು ಶ್ಲಾಘನಾರ್ಹ ಕಾರ್ಯ ಎಂದರು. ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಸತ್ಯನಾರಾಯಣ ಪೂಜಾ ಸಮಿತಿ ಗಾಂಧಿನಗರ ಇದರ ಅಧ್ಯಕ್ಷ ಜಯರಾಮ್ ಕೋಟ್ಯಾನ್, ಮಡಿವಾಳ ಸಮಾಜ ಸೇವಾ ಸಂಘದ ಪ್ರಮುಖ ಶ್ಯಾಮ್ ಮಡಿವಾಳ್, ಡಾ.ಮಹಿಮಾ ಮತ್ತು ಡಾ.ಪ್ರಾಪ್ತಿ ಉಪಸ್ಥಿತರಿದ್ದರು. ಶಂಕರ್ ಕೋಟ್ಯಾನ್ ನಿರೂಪಿಸಿ ದರು. ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್ ಕಾರ್ಯದರ್ಶಿ ಭರತ್ ಶೆಟ್ಟಿ ವಂದಿಸಿದರು.


