ದಾವಣಗೆರೆ: ನವಂಬರ್10, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕೆರೆಬಿಳಚಿ ಗ್ರಾಮ ಸಮಿತಿ ವತಿಯಿಂದ ಗ್ರಾಮದ ರಜಿಯಾ ಶಹದಿ ಮಹಲ್ ನಲ್ಲಿ ಪಕ್ಷ ಸೇರ್ಪಡೆ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.

ಈ ಸಮಾವೇಶದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ಹನ್ನನ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಸ್ತುತ ಕಾಲಘಟ್ಟದಲ್ಲಿ ಎಸ್ಡಿಪಿಐ ಪಕ್ಷದ ಅಗತ್ಯತೆ, ಸಮಾಜಮುಖಿ ಚಟುವಟಿಕೆಗಳ ಅಗಾಧತೆ ಹಾಗೂ ಯುವಕರ ಪಾತ್ರದ ಕುರಿತು ಮಾತನಾಡುತ್ತಾ, ಇಂದಿನ ಸಮಾಜವು ಅನ್ಯಾಯ, ಅಸಮಾನತೆ ಮತ್ತು ದ್ವೇಷದ ರಾಜಕಾರಣದಿಂದ ಕಂಗೆಟ್ಟಿದೆ. ಈ ಪರಿಸ್ಥಿತಿಯಲ್ಲಿ ಎಸ್ಡಿಪಿಐ ಪಕ್ಷವು ಜನರ ಹಕ್ಕುಗಳ ಪರ ಧ್ವನಿ ಎತ್ತುವ, ನ್ಯಾಯ ಮತ್ತು ಶಾಂತಿಯ ಪರ ನಿಂತಿರುವ ಜನಪರ ವೇದಿಕೆ. ಪಕ್ಷದ ಹೋರಾಟವು ಕೇವಲ ರಾಜಕೀಯವಲ್ಲ ಅದು ಸಾಮಾಜಿಕ ಬದಲಾವಣೆಯ ಶಕ್ತಿ. ಎಸ್ಡಿಪಿಐ ಪಕ್ಷದ ತತ್ವ, ಗುರಿ ಹಾಗೂ ಹೋರಾಟದ ದಿಕ್ಕು ಕುರಿತು ವಿವರಿಸುತ್ತಾ, ಎಲ್ಲಾ ವರ್ಗದ ಜನರು ಪಕ್ಷದ ಹೋರಾಟದ ಭಾಗಿಗಳಾಗುವಂತೆ ಕರೆ ನೀಡಿದರು.
ಅವರು ಯುವ ಸಮುದಾಯವು ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಹಾಗೂ ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣಾ ನಿಟ್ಟಿನಲ್ಲಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ, ಜನರ ಸಮಸ್ಯೆಗಳಿಗೆ ಪಕ್ಷದ ಕಾರ್ಯಕರ್ತರು ಸ್ಪಂದಿಸುವ ಮೂಲಕ, ಜನಸ್ನೇಹಿಯಾಗಿ ಗುರುತಿಸಿಕೊಳ್ಳುವಂತಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ (JDS) ಪಕ್ಷದ ಕೆಲ ಪ್ರಮುಖ ನಾಯಕರು ಹಾಗೂ ಅನೇಕ ಉತ್ಸಾಹಿ ಯುವಕರು ಎಸ್ಡಿಪಿಐ ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧಿಕಾರಿ ಮೊಹಮ್ಮದ್ ಅಜರುದ್ದೀನ್ ಸ್ವಾಗತಿಸಿದರು, ಜಿಲ್ಲಾಧ್ಯಕ್ಷರಾದ ಎ ಆರ್ ತಾಹೀರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಜ್ಯ ಕಾರ್ಯದರ್ಶಿ ಮೌಲಾನಾ ಸೈಯದ್ ಅಕ್ರಮ್ ರವರು ಸಮಾರೋಪ ಭಾಷಣ ಮಾಡಿದರು, ಹಾಗು ಕೆರೆಬಿಳಚಿ ಗ್ರಾಮ ಸಮಿತಿ ಅಧ್ಯಕ್ಷರಾದ ಸೈಯದ್ ಸಲ್ಮಾನ್ ರವರು ವಂದನಾರ್ಪಣೆ ಮಾಡಿದರು ಜಿಲ್ಲಾ ಹಾಗೂ ತಾಲೂಕು ಮಟ್ಟದ ನಾಯಕರು, ಸ್ಥಳೀಯ ಮುಖಂಡರು, ಸಮಾಜ ಸೇವಕರು ಮತ್ತು ಇತರರು ಉಪಸ್ಥಿತರಿದ್ದರು.


