ಮೂಡುಬಿದಿರೆ : ಇಲ್ಲಿನ ಪಣಪಿಲದಲ್ಲಿ ಜೋಡುಕರೆ ಕಂಬಳ ಸಮಿತಿಯ ವತಿಯಿಂದ 16ನೇ ವರುಷದ ಹೊನಲು ಬೆಳಕಿನ ‘ಜಯ-ವಿಜಯ’ ಜೋಡುಕರೆ ಕಂಬಳವು ನ.15 ರಂದು ನಡೆಯಲಿದೆ ಎಂದು ಕಂಬಳ ಸಮಿತಿಯ ಅಧ್ಯಕ್ಷರಾದ ನಂದೊಟ್ಟು ಪಣಪಿಲ ಯುವರಾಜ್ ಜೈನ್ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಮಿತಿಯ ಕಾಯ೯ಧ್ಯಕ್ಷ ಕೆಲ್ಲಪುತ್ತಿಗೆ ಗುತ್ತು ಸುಭಾಶ್ಚಂದ್ರ ಚೌಟ ಅವರು ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಪಣಪಿಲ ಕಂಬಳವು ಕಳೆದ 15 ವರುಷಗಳಿಂದಲೂ ಉತ್ತಮವಾಗಿ ನಡೆದುಕೊಂಡು ಬಂದಿದೆ. ಇದೀಗ 16ನೇ ವರುಷದ ಕಂಬಳಕ್ಕೆ ಸಿದ್ಧತೆ ನಡೆಯುತ್ತಿದ್ದು, ಕಳೆದ ಒಂದು ತಿಂಗಳಿಂದ ಕಂಬಳ ಕರೆ ಮತ್ತು ಆ ಪರಿಸರದಲ್ಲಿ ಕಂಬಳ ಸಮಿತಿ ಸದಸ್ಯರು ಮತ್ತು ಊರ ಸ್ವಯಂ ಸೇವಕರು ಕಂಬಳದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ, ಅಚ್ಚುಕಟ್ಟಿನ ವ್ಯವಸ್ಥೆಗಳು ನಡೆಯುತ್ತಿದೆ.ಕಂಬಳಕ್ಕೆ ಚಿತ್ರ ನಿರ್ಮಾಪಕ, ಉದ್ಯಮಿ ಲಾಂಚುಲಾಲ್ ಹಾಗೂ ದಾನಿಗಳ ನೆರವಿನಿಂದ ಪ್ರೋತ್ಸಾಹದೊಂದಿಗೆ ಕಂಬಳ ಯಶಸ್ವಿಯಾಗಿ ನಡೆಯಲಿದೆ ಎಂದರು.

ಸುಮಾರು 160 ಜತೆ ಕೋಣಗಳು ಈ ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಹಳ್ಳಿಯ ಕೂಟ ಎಂಬ ಕಂಬಳ ಇಂದಿಗೆ ಉಳಿದುಕೊಂಡಿದೆ ಎಂದರೆ ಅದು ಪಣಪಿಲ ಕಂಬಳ ಎಂದು ಹೇಳಿದರು.ಉಪಾಧ್ಯಕ್ಷ ಮುನಿರಾಜ್ ಹೆಗ್ಡೆಯವರು ಕಂಬಳ ಪ್ರೋತ್ಸಾಹಕರ ಕುರಿತು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೆ.ಪಣಪಿಲ ಅವರು ಸ್ವಾಗತಿಸಿ ಪಣಪಿಲ ಕಂಬಳದ ಕುರಿತು ಮತ್ತು ಅಲ್ಲಿನ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.


