ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಮತ್ತು ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಯೋಗದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಹಾಗೂ ಅಪಘಾತ ಮತ್ತು ಆರೋಗ್ಯ ವಿಮೆ ಶಿಬಿರವು ನ.೧೬ರಂದು ಭಾನುವಾರ ಇಲ್ಲಿನ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಪವರ್ ಫೆಂಡ್ಸ್ ಬೆದ್ರದ ಉಪಾಧ್ಯಕ್ಷ, ವಕೀಲ ಜಯಪ್ರಕಾಶ್ ಭಂಡಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಅಪಘಾತಕ್ಕೊಳಗಾದವರು ಅಥವಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಹಲವರು ಚಿಕಿತ್ಸೆ ವೆಚ್ಚ ಭರಿಸಲಾಗದೆ ಆರ್ಥಿಕ ಸಹಾಯಕ್ಕಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರ ಬಳಿ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ಸಂಕಷ್ಟವನ್ನು ದೂರ ಮಾಡುವ ಸಲುವಾಗಿ ಈ ಬಾರಿಯ ಶಿಬಿರದಲ್ಲಿ ಸಾರ್ವಜನಿಕರಿಗೆ ಅಪಘಾತ ಮತ್ತು ಆರೋಗ್ಯ ವಿಮೆ ನೋಂದಣಿ ಮಾಡಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಪವರ್ ಫ್ರೆಂಡ್ಸ್ ಬೆದ್ರವು ಆಯೋಜಿಸಿದ ನಾಲ್ಕನೇ ಶಿಬಿರ ಇದಾಗಿದ್ದು ಬೆಳಿಗ್ಗೆ 9.00ಕ್ಕೆ ನೋಂದಣಿ ಆರಂಭವಾಗಲಿದ್ದು ಗಂಟೆ ೧೦.00ಕ್ಕೆ ಉದ್ಯಮಿ ಕೆ.ಶ್ರೀಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ವಿಭಾಗದ ಅಂಚೆ ಅಧೀಕ್ಷಕ ರವೀಂದ್ರ ನಾಯಕ್ ಸಹಿತ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಅಂಚೆ ಇಲಾಖೆ ಪುತ್ತೂರು ವಿಭಾಗದ ಮಾರುಕಟ್ಟೆ ಅಧಿಕಾರಿ ಗುರುಪ್ರಸಾದ್ ಕೆ ಮಾತನ್ನಾಡಿ ಅಂಚೆ ಇಲಾಖೆಯ ಸಹಭಾಗಿತ್ವದ ಅಪಘಾತ ಮತ್ತು ಆರೋಗ್ಯ ವಿಮೆಯಲ್ಲಿ ಪಾಲಿಸಿದಾರ ಕನಿಷ್ಟ ಪ್ರೀಮಿಯಂ ಮೊತ್ತ ಕಟ್ಟಿ ರೂ ೧೫ ಲಕ್ಷದವರೆಗೆ ಕ್ಲೖಮ್ ಗೆ ಅವಕಾಶ ಇರುತ್ತದೆ. ಸಾರ್ವಜನಿಕರಿಗೆ ಇದರ ಪ್ರಯೋಜನ ಸಿಗುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಶಿಬಿರದಲ್ಲಿ ಸರಕಾರದ ವಿವಿಧ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸುಕನ್ಯಾ ಸಮೃದ್ಧಿ ಮತ್ತಿತರ ಸೇವೆಗಳ ನೋಂದಾಣಿ ಮಾಡಿಸಲಾಗುವುದು ಎಂದರು. ಶಿಬಿರಕ್ಕೆ ಬರುವ ಸಾರ್ವಜನಿಕರು ಮೊಬೈಲ್, ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ತರಬೇಕು ಎಂದರು. ಹೆಚ್ಚಿನ ವಿವರಗಳಿಗೆ ೯೬೧೧೪೩೬೫೧೪ ಅಥವಾ ೮೩೧೦೮೨೫೦೮೮ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಲಾಗಿದೆ.
ಶಿಬಿರದ ಬಳಿಕ ಸಂಜೆ ೬-೩೦ಕ್ಕೆ ಕನ್ನಡ ಭವನದಲ್ಲಿ ಪವರ್ ಫ್ರೆಂಡ್ಸ್ ಬೆದ್ರ ಅರ್ಪಿಸುವ ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯದ `ಸೆಕ್ಷನ್ ೧೪೪’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲ್ಲಿದ್ದು ಪ್ರವೇಶ ಉಚಿತವಾಗಿರುತ್ತದೆ ಎಂದು ನಾಟಕದ ರಚನೆಗಾರ ಸಂತೋಷ್ ಎಂ.ಪುಚ್ಚೇರಿ ಹೇಳಿದರು.
ಶಾಮಿಯಾನ ಮಾಲಕರ ಸಂಘ ಮೂಡುಬಿದಿರೆ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ದಿವಾಕರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


