ಉಳ್ಳಾಲ: ಭಕ್ತಿಯಿಂದ ಭಜನೆ ಮಾಡಿದರೆ ಪರಿಪೂರ್ಣ ಆಯುಶ್ಯ ಮುಗಿಯುವವರೆಗೂ ದೇವನ ಸಹಾಯ ಇರುತ್ತದೆ. ಮಲಗಿ ಭಜನೆ ಹಾಡಿದರೆ ದೇವನು ಕುಳಿತು ಕೇಳುತ್ತಾನೆ, ಕೂತು ಹಾಡಿದರೆ ದೇವನು ನಿಂತು ಕೇಳುತ್ತಾನೆ, ಕುಣಿತ ಭಜನೆ ದೇವನಿಗೆ ಅತಿ ಇಷ್ಟ ಎಂದು ಉಳ್ಳಾಲ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಭಜನಾ ಚಿಂತಕ ವಸಂತ ನಾಯಕ್ ಹೇಳಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆ ಖಾಸಗಿ ಸಭಾಂಗಣದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾನುವಾರ ನಡೆದ 28ನೇ ವರ್ಷದ ‘ಮುದ್ದುಕೃಷ್ಣ-2025’ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಕ್ತಿ, ಜ್ಞಾನ, ನಡೆ ಭಜನೆಯ ವಿಶೇಷತೆ, ಭಗವಂತನತ್ತ ಸಾಗಲು ಭಜನೆ ಪೂರಕ. ಮಕ್ಕಳು ಪ್ರತಿದಿನ ಕನಿಷ್ಠ ಅರ್ಧ ಗಂಟೆ ಭಜನೆಯಲ್ಲಿ ತೊಡಗಿಸಿಕೊಂಡರೆ ತಮ್ಮ ಅಭಿಲಾಷೆ ಈಡೇರುತ್ತದೆ, ಕಲಿಯಗದಲ್ಲೂ ಭಜನೆಗೆ ಅತ್ಯಂತ ಪ್ರಾಮುಖ್ಯತೆ ಇದೆ ಎಂದು ತಿಳಿಸಿದರು.
ಮುದ್ದುಕೃಷ್ಣ, ಪುಟಾಣಿಕೃಷ್ಣ, ಬಾಲಕೃಷ್ಣ ವೇಷ ಪ್ರದರ್ಶನ, ರಾಧಾಕೃಷ್ಣ ಗೀತಾನೃತ್ಯ, ಭಕ್ಯ ಸುಧಾನ ಭಾಷಣ, ಭಕ್ತಿಗೀತೆ, ಭಕ್ತಿಯೋಗ, ಚಿತ್ರರಚನೆ ಸಹಿತ ವಯಸ್ಸಿಗೆ ಅನುಗುಣವಾಗಿ ಸ್ಪರ್ಧೆಗಳು ನಡೆದವು.
ಅಜಿಂಕ್ಯಾ, ಪೂರ್ವಿ ಮಲ್ನಾಡ್, ಮಹಿಮಾ, ಜೆನಿತಾ, ತನಿಷ್ಕಾ, ಮಹಮ್ಮದ್ ರಯಾಝ್ ಬೋಳಿಯಾರ್ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ನಾಟಕ ಕಲಾವಿದ ಸುರೇಶ್ ಜೋಡುಕಲ್ಲು, ಪ್ರಾಧ್ಯಾಪಕಿ ಅನಿತಾ, ಭಾಷಣರಾದ ಕಿಶಾನ್ ಮಂಗಳಾದೇವಿ, ಸಂಗೀತ ಕಲಾವಿದರಾದ ಯಶಸ್ವಿನಿ ಉಳ್ಳಾಲ್, ರಕ್ಷಿತ್ ಅಸೈಗೋಳಿ, ಚೈತ್ರಾ, ರಾಜ್ ಗೋಪಾಲ್, ಪುಷ್ಪಾ ಮುರಳೀಧರ್, ಚಿತ್ರ ಕಲಾವಿದರಾದ ಜಯಪ್ರಕಾಶ್ ಕೋಟೆಕಾರ್, ಕಾರ್ತಿಕ್ ಉಳ್ಳಾಲ್, ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತ ತೊಕ್ಕೊಟ್ಟು, ಉಪಾಧ್ಯಕ್ಷ
ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ ಅಶೋಕ್ ಕ್ಲಿಕ್ ಮೊದಲಾದವರು ಉಪಸ್ಥಿತರಿದ್ದರು.
ಬಬಿತಾ ಲತೀಶ್ ಕಾರ್ಯಕ್ರಮ ನಿರೂಪಿಸಿದರು.


