“ನಾರಾಯಣ ಗುರುಗಳ ಸಾಮಾಜಿಕ ಕ್ರಾಂತಿಯ ಮೂಲ ಕೃಷಿ ಬದುಕು” – ಡಾ.ವೈ ಎನ್. ಶೆಟ್ಟಿ
vltvkannada.com ಕೊಣಾಜೆ: ಬ್ರಹ್ಮಶ್ರೀ ನಾರಾಯಣ ಗುರುಗಳು ಕೃಷಿ ಮೂಲ ಕುಟುಂಬದಿಂದ ಬಂದವರು. ಅವರ ಸಮಾಜ ಸೇವೆಯ ಪ್ರಮುಖ ಅಂಗ ವ್ಯವಸಾಯ, ಸಣ್ಣಕೈಗಾರಿಕೆ ಮತ್ತು ಶಿಕ್ಷಣವಾಗಿತ್ತು ಎಂದು ಜನಪದ ವಿದ್ವಾಂಸರು ಹಿರಿಯ ಆಯುರ್ವೇದ ತಜ್ಞ. ವೈ. ಎನ್. ಶೆಟ್ಟಿ ಇವರು ಅಭಿಪ್ರಾಯಪಟ್ಟರು.

ಅವರು ಪಾವಂಜೆಯ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಸಂಯೋಜನೆಯಲ್ಲಿ ನಡೆದ ʼಕೃಷಿ ನಿನಾದ ನೇಗಿಲ ಯೋಗʼ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಾರಾಯಣ ಗುರುಗಳ ಚಿಂತನೆಯ ಬಗ್ಗೆ ಮಾತನಾಡಿದರು.
ಇಂದು ಯುವಕರಿಗೆ ತಂತ್ರಜ್ಞಾನದ ಅನುಭವದೊಂದಿಗೆ ಪ್ರಕೃತಿ ಸತ್ಯವನ್ನು ತಿಳಿಸುತ್ತಾ ಅನ್ನದ ಹುಡುಕಾಟದ ಚರಿತ್ರೆಯನ್ನು ತಿಳಿಸುವುದು ಅಗತ್ಯವಾಗಿದೆ ಮಾನವ ಬದುಕು ಪ್ರಕೃತಿಯಿಂದ ದೂರವಾಗುತ್ತಿದ್ದು ಮನಸ್ಸು ವಿಕೃತಗೊಳ್ಳುತ್ತಿದ್ದು ಅದನ್ನು ಸರಿದಾರಿಗೆ ತರಬೇಕಾದರೆ ಮಣ್ಣಿನ ಬದುಕು ಮಾತ್ರ ನಮಗೆ ಆಧಾರ ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಜಯರಾಜ್ ಎನ್ ಇವರು ವಹಿಸಿದ್ದು ವಿದ್ಯಾರ್ಥಿಗಳನ್ನು ಪಟ್ಟಣದಿಂದ ಹಳ್ಳಿಯ ಕಡೆಗೆ ಮುಖ ಮಾಡಿ ನಾರಾಯಣ ಗುರುಗಳಂತಹ ಸಾಮಾಜಿಕ ಕ್ರಾಂತಿಯ ಹರಿಕಾರರ ಬದುಕನ್ನು ಪ್ರಕೃತಿಯ ಜೊತೆಯಲ್ಲಿ ಅವರ ಮನಸ್ಸಿಗೆ ತುಂಬಿಸುವ ಕೆಲಸವನ್ನು ಇಂದು ಅಧ್ಯಯನ ಪೀಠ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಟಿಪಳ್ಳ ನಾರಾಯಣಗುರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ . ಪಿ ದಯಾಕರ್ ,ಲಯನ್ ಯಾದವ ದೇವಾಡಿಗ, ಕಡಂಬೋಡಿ ಮಹಾಬಲ ಪೂಜಾರಿ, ಲಯನ್ ಯಶೋಧರ ಸಾಲಿಯಾನ್, ರಮೇಶ್ ದೇವಾಡಿಗ, ಬಾಲಚಂದ್ರ ಸನಿಲ್ ಭಾಗವಹಿಸಿದ್ದರು.
ನಾರಾಯಣಗುರು ಅಧ್ಯಯನ ಪೀಠದ ಸಂಶೋಧನಾ ಸಹಾಯಕರಾದ ಡಾ.ರವಿರಾಜ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೇಂದ್ರದ ಅಧ್ಯಕ್ಷರಾದ ಡಾ. ಗಣೇಶ ಅಮೀನ್ ಸಂಕಮರ್ ಸ್ವಾಗತಿಸಿ, ಕಾರ್ಯದರ್ಶಿ ಜಯಂತಿ ಸಂಕಮಾರ್ ವಂದಿಸಿದರು. ಭವ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಊರಿನ ಹಿರಿಯ ಕೃಷಿಕ ಮಹಿಳೆಯರೊಂದಿಗೆ ಬೆಳೆಯಲ್ಲಿದ್ದ ಕಳೆಯನ್ನು ತೆಗೆದು ,ಮತ್ತು ಬೆಳೆಗೆ ಆಟಿ ತಿಂಗಳಲ್ಲಿ ಕಾಸರಕನ ಮರದ ಗೆಲ್ಲನ್ನು ನೆಟ್ಟು ಪ್ರಕೃತಿ ಮಾಂತ್ರಿಕ ಶಕ್ತಿಯನ್ನು ತುಂಬುವ ಪ್ರಾತ್ಯಕ್ಷಿಕೆ ಮತ್ತು ತುಳುನಾಡಿನ ಹಿರಿಯರು ಆಟಿ ತಿಂಗಳಲ್ಲಿ ಆಡುತ್ತಿದ್ದ ಸರಿ ಮುಗುಳಿ ಆಟದ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿತು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಎನ್ ಸಿ ಸಿ ವಿಭಾಗದ ಕ್ರಿಯಾಶೀಲ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಅನುಭವವನ್ನು ಪಡೆದುಕೊಂಡರು.