ಮೂಡುಬಿದಿರೆ: ನಮ್ಮ ಭಾಷೆ, ಸಂಸ್ಕøತಿ ಉಳಿವಿಗೆ ಕನ್ನಡ ಪರ ಕೆಲಸಗಳು ನಿರಂತರವಾಗಿ ನಡೆಯುತ್ತಿರಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳು ಕುಂಠಿತವಾಗುತ್ತಿರುವುದು ಖೇದಕರ ಸಂಗತಿ. ಆದರೆ ಡಾ.ನಾ ಮೊಗಸಾಲೆಯವರು ಕಾಂತಾವರ ಎಂಬ ಸಣ್ಣ ಹಳ್ಳಿಯಲ್ಲಿ ಕನ್ನಡ ಸಂಘವನ್ನು ಕಟ್ಟಿ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಕನ್ನಡದ ಕಂಪನ್ನು ನಾಡಿನ ಉದ್ದಕ್ಕು ಪಸರಿಸುತ್ತಿರುವುದು ಶ್ಲಾಘನಾರ್ಹ ಎಂದು ಹಿರಿಯ ಸಾಹಿತಿ ಮೋಹನ ಕುಂಟಾರ್ ಕಾಸರಗೋಡು ಹೇಳಿದರು.

ಕನ್ನಡ ಸಂಘ ಕಾಂತಾವರದ ಐವತ್ತರ ಸಂಭ್ರಮದ ದ್ವಿತೀಯ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಾಡಿನ ಎಂಟು ಮಂದಿ ಸಾಧಕರಿಗೆ ದತ್ತಿಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾಂತಾವರದಲ್ಲಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ ಡಾ.ಮೊಗಸಾಲೆಯವರು ಜನರಲ್ಲಿ ಕನ್ನಡ ಪುಸ್ತಕದ ಪ್ರೀತಿ, ಓದುವ ಹವ್ಯಾಸವನ್ನು ಬೆಳೆಸಿ ಲೇಖಕರು, ಸಾಹಿತಿಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ ಎಂದರು.
ದತ್ತಿ ಪ್ರಶಸ್ತಿ ಪುರಸ್ಕೃತರು:
ಕರ್ನಾಟಕ ಏಕೀಕರಣದ ನೇತಾರ ಕೆ.ಬಿ ಜಿನರಾಜ ಹೆಗ್ಡೆ ಪುತ್ರಿ ಸರಸ್ವತಿ ಬಲ್ಲಾಳ್ ಮತ್ತು ಪತಿ ಡಾ.ಸಿ.ಕೆ. ಬಲ್ಲಾಳ್ ಸ್ಥಾಪಿಸಿದ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ'ಯನ್ನು ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಅವರಿಗೆ ರೂ ಹತ್ತು ಸಾವಿರ ನಗದು, ತಾಮ್ರ ಪತ್ರ ನೀಡಿ ಅಭಿನಂದಿಸಲಾಯಿತು. ಧಾರವಾಡದ ಜಿ.ಎಂ.ಹೆಗಡೆ ಸ್ಥಾಪಿಸಿದಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿ’ಯನ್ನು ತುಮಕೂರಿನ ಡಾ.ಆರ್ ಲಕ್ಷ್ಮೀನಾರಾಯಣ ಅವರಿಗೆ ರೂ ಹತ್ತು ಸಾವಿರ ನಗದು ಹಾಗೂ ತಾಮ್ರದ ಪತ್ರ ನೀಡಿ ಅಭಿನಂದಿಸಲಾಯಿತು. ನಾಡಿಗೆ ನಮಸ್ಕಾರ ಗ್ರಂಥ ಮಾಲೆಗೆ ಕೃತಿಗಳನ್ನು ಬರೆದುಕೊಟ್ಟ ಲಕ್ಷ್ಮಣ ಕೊಡಸೆ ಅವರಿಗೆ ರೂ ಹತ್ತು ಸಾವಿರ ನಗದು, ತಾಮ್ರ ಪತ್ರದೊಂದಿಗೆ ಶ್ರೇಷ್ಠ ಪತ್ರಕರ್ತ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು.
ರಾಷ್ಟ್ರ ಪ್ರಶಸ್ತಿ ಪುರಸ್ಕøತ ಬಾಲಕೃಷ್ಣ ಆಚಾರ್ ಅವರ ಪತ್ನಿ ವಾಣಿ ಬಿ. ಆಚಾರ್ ಸ್ಥಾಪಿಸಿದಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ’ಯನ್ನು ಕಾಂತಾವರದ ಸರೋಜಿನಿ ನಾಗಪ್ಪಯ್ಯ ಅವರಿಗೆ ರೂ ಹತ್ತು ಸಾವಿರ ನಗದು, ತಾಮ್ರ ಪತ್ರದೊಂದಿಗೆ ನೀಡಿ ಸನ್ಮಾನಿಸಲಾಯಿತು. ಮೊಗಸಾಲೆ ಕುಟುಂಬ ಸ್ಥಾಪಿಸಿದ ಕಾಂತಾವರ ಸಾಹಿತ್ಯ ಪ್ರಶಸ್ತಿಯನ್ನು ರೂ ಹತ್ತು ಸಾವಿರ ನಗದು, ತಾಮ್ರ ಪತ್ರದೊಂದಿಗೆ ಕಾಸರಗೋಡಿನ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಸರೋಜಿನಿ ನಾಗಪ್ಪಯ್ಯ ಈಶ್ವರಮಂಗಲ ದತ್ತಿನಿಧಿಯಿಂದ ಯಕ್ಷಗಾನ ಸಾಹಿತ್ಯ ಸಂಶೋಧನಾ ಪ್ರಶಸ್ತಿ'ಯನ್ನು ಉತ್ತರ ಕನ್ನಡದ ಅಶೋಕ ಹಾಸ್ಯಗಾರ ಅವರಿಗೆ ರೂ ಹತ್ತು ಸಾವಿರ ನಗದು ಹಾಗೂ ತಾಮ್ರದ ಪತ್ರದೊಂದಿಗೆ ನೀಡಿ ಸನ್ಮಾನಿಸಲಾಯಿತು. ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್ ಅವರಮಂಜನಬೈಲ್ ರಂಗ ಸ್ಮಾರಕ ಪ್ರಶಸ್ತಿ’ಯನ್ನು ರೂ ಹತ್ತು ಸಾವಿರ ನಗದು ಹಾಗೂ ತಾಮ್ರ ಪತ್ರದೊಂದಿಗೆ ಶಶಿರಾಜ ರಾವ್ ಕಾವೂರು ಅವರಿಗೆ ನೀಡಿ ಸನ್ಮಾನಿಸಲಾಯಿತು.
`ಸಂಘದ ವಾರ್ಷಿಕ ಗೌರವ ಪ್ರಶಸ್ತಿ’ಯನ್ನು ಹುಲಿಮನೆ ಜಯರಾಮ ಹೆಗಡೆ ಮಿಜಾರು ಅವರಿಗೆ ರೂ ಐದು ಸಾವಿರ ನಗದು, ತಾಮ್ರಪತ್ರ ನೀಡಿ ಗೌರವಿಸಲಾಯಿತು. ಇದೇ ವೇಳೆ ದತ್ತಿ ಪ್ರಶಸ್ತಿ ಪ್ರಾಯೋಜಕರನ್ನು ಗೌರವಿಸಲಾಯಿತು. ದತ್ತಿಪ್ರಶಸ್ತಿ ಪ್ರಾಯೋಜಕರ ಪರವಾಗಿ ಡಾ.ಸಿ.ಕೆ ಬಲ್ಲಾಳ್ ದಂಪತಿ ಪ್ರಸನ್ನ ಮೊಗಸಾಲೆ ಮತ್ತು ಶ್ರೀಪತಿ ಮಂಜನಬೈಲ್ ಅವರನ್ನು ಗೌರವಿಸಲಾಯಿತು. ಹಿರಿಯ ವಿಮರ್ಶಕ ಬೆಳಗೋಡು ರಮೇಶ್ ಭಟ್ ಮೈಸೂರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು.
ಉಡುಪಿ ಸಂಸ್ಕೃತಿ ವಿಶ್ವಪ್ರತಿಷ್ಠಾನದ ಅಧ್ಯಕ್ಷ ಯು.ವಿಶ್ವನಾಥ ಶೆಣೈ, ಉದ್ಯಮಿ ಕೆ. ಶ್ರೀಪತಿ ಭಟ್, ರಾಮಚಂದ್ರ ನಾಯಕ್ ಕಾರ್ಕಳ ಉಪಸ್ಥಿತರಿದ್ದರು. ದಿವಾಕರ ಕುಮಾರ್ ಸ್ವಾಗತಿಸಿದರು. ಕನ್ನಡ ಸಂಘದ ಸ್ಥಾಪಕರಾದ ಡಾ.ನಾ ಮೊಗಸಾಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಾನಂದ ನಾರಾವಿ ನಿರೂಪಿಸಿದರು. ಧರ್ಮರಾಜ ಕಂಬಳಿ ವಂದಿಸಿದರು.


