ಉಳ್ಳಾಲ: ಮಂಜನಾಡಿ ಗ್ರಾಮದ ಆರಾಧ್ಯ ದೇವರಾದ ಶ್ರೀ ವಿಷ್ಣುಮೂರ್ತಿ ಜನಾರ್ಧನ ಕ್ಷೇತ್ರಕ್ಕೆ ಸುಮಾರು 1000 ವರುಷಗಳ ಭವ್ಯ ಇತಿಹಾಸವಿರುವ ಕ್ಷೇತ್ರದಲ್ಲಿ ಜನವರಿ 11 ರಿಂದ 18 ರ ತನಕ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿದಾನಗಳೊಂದಿಗೆ ವರ್ಷಾವಧಿ ಉತ್ಸವ ಮತ್ತು ಮಹಾರಥೋತ್ಸವವು ನಡೆಯಲಿದ್ದು, ಜನವರಿ 15ರಂದು ನೂತನ ಮಹಾರಥ, ಪುಷ್ಪರಥ ಹಾಗೂ ಪಲ್ಲಕ್ಕಿ ಸಮರ್ಪಣೆ ನಡೆಯಲಿದೆ ಎಂದು ನೂತನ ರಥ ನಿರ್ಮಾಣ ಸಮಿತಿ ಗೌರವಾಧ್ಯಕ್ಷರಾದ ತಿರುಮಲೇಶ್ವರ ಭಟ್ ಪೆರಡೆ ತಿಳಿಸಿದರು.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜಾತ್ರೋತ್ಸವ ಪ್ರಯುಕ್ತ ಜನವರಿ 11 ರಂದು ಕುತ್ತಾರು ರಾಜರಾಜೇಶ್ವರಿ ಸಾನಿಧ್ಯದಿಂದ ಮಧ್ಯಾಹ್ನ 2.30 ಗಂಟೆಗೆ ಸರಿಯಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆಯು ಮಂಜನಾಡಿ ಕ್ಷೇತ್ರಕ್ಕೆ ಹೊರಡಲಿದೆ. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೊರೆಕಾಣಿಕೆ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಅತಿಥಿ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಗಣೇಶ್ ಭಟ್ ಪಂಜಾಳ ಅವರು ಮಂಜನಾಡಿ ಕ್ಷೇತ್ರಕ್ಕೆ ಸಮರ್ಪಿಸಿರುವ ಪುಷ್ಪರಥವು ತಲಪಾಡಿಯಿಂದ ಮಧ್ಯಾಹ್ನ 1.30 ಗಂಟೆಗೆ ಹೊರಟು 2.30ಕ್ಕೆ ಹೊರೆಕಾಣಿಕೆ ಶೋಭಾಯಾತ್ರೆ ಹೊರಡಲಿರುವ ಕುತ್ತಾರಿನ ರಾಜರಾಜೇಶ್ವರಿ ದೇವಸ್ಥಾನಕ್ಕೆ ಸೇರಲಿದೆ. ಭಜನಾ ತಂಡಗಳಿಂದ ಕುಣಿತ ಭಜನೆ, ಟ್ಯಾಬ್ಲೋ, ಹೊರೆಕಾಣಿಕೆ ವಾಹನಗಳೊಂದಿಗೆ ಪುಷ್ಪರಥವು ಕುತ್ತಾರು-ದೇರಳಕಟ್ಟೆ-ನಾಟೆಕಲ್ ಮಾರ್ಗವಾಗಿ ಮಂಜನಾಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ವೈಭವದ ಶೋಭಾಯಾತ್ರೆಯು ನಡೆಯಲಿದೆ.

ಜನವರಿ 12 ರಂದು ಬೆಳಿಗ್ಗೆ 8 ರಿಂದ ಸಾಮೂಹಿಕ ರುದ್ರಯಾಗ, ಜನವರಿ 14 ರಂದು ಧ್ವಜಾರೋಹಣ, ಜನವರಿ 15ರಂದು ಬಲಿವಾಡು ಸೇವೆ, ಸಂಜೆ 6.30 ದೊಡ್ಡರಂಗ ಪೂಜೆ, ರಾತ್ರಿ 7ಕ್ಕೆ ಮಹಾರಥ, ಪುಷ್ಪರಥ, ಪಲ್ಲಕ್ಕಿ ಸಮರ್ಪಣೆ, ಸಂಜೆ:7.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ:8.30 ಕ್ಕೆ ಬಲಿ ಉತ್ಸವ,ಪುಷ್ಪ ರಥೋತ್ಸವ ನಡೆಯಲಿದೆ.
ಜ.15 ರಂದು ನಡೆಯಲಿರುವ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪಲಿಮಾರು ಮಠದ ಪರಮಪೂಜ್ಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದು,ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.ಸ್ಪೀಕರ್ ಯು.ಟಿ.ಖಾದರ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ರಾಜಕೀಯ,ಧಾರ್ಮಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೇದಿಕೆಯಲ್ಲಿ ಕ್ಷೇತ್ರಕ್ಕೆ ಪುಷ್ಪರಥ ಸಮರ್ಪಿಸಿದ ಗಣೇಶ ಭಟ್ ಪಂಜಾಳರಿಗೆ ಸನ್ಮಾನ ನಡೆಯಲಿದೆ.
ಜ.16 ರಂದು ಸಂಜೆ 7ಕ್ಕೆ ಪಲ್ಲಕ್ಕಿ ಉತ್ಸವ, ಪುಷ್ಪರಥೋತ್ಸವ, ಜ.17ರಂದು ಮಧ್ಯಾಹ್ನ 12ಕ್ಕೆ ಮಹಾರಥಾರೋಹಣ, ಸಂಜೆ 6.30ಕ್ಕೆ ಮಹಾರಥೋತ್ಸವ, ಜ.18 ರಂದು ಬೆಳಿಗ್ಗೆ 8 ರಿಂದ ಸಾಮೂಹಿಕ ವಿಷ್ಣುಯಾಗ, ಸಂಜೆ 6.30 ರಿಂದ ಯಾತ್ರಾ ಹೋಮ, ಆರಾಟ ಬಲಿ ಕಟ್ಟೆ ಪೂಜೆ, ಅವಕೃತ ಧ್ವಜಾರೋಹಣ ನಡೆಯಲಿದ್ದು, ಪ್ರತೀ ದಿನ ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ಬಳಿಕೆ ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆಯೆಂದು ಮಾಹಿತಿ ನೀಡಿದರು.
ಆನುವಂಶಿಕ ಅರ್ಚಕರು ಟಿ. ಸುಬ್ರಹ್ಮಣ್ಯ ಭಟ್, ಟಿ ವೆಂಕಟೇಶ ಆಚಾರ್ಯ, ಪವಿತ್ರ ಪಾಣಿ ಬಲ್ಲಾಳಬೀಡು ಶ್ರೀನಿವಾಸ ಬಲ್ಲಾಳರು,
ನೂತನ ರಥ ನಿರ್ಮಾಣ ಸಮಿತಿ ಅಧ್ಯಕ್ಷರು ಮಂಜುನಾಥ ಅಡಪ್ಪ ತೇವುನಾಡುಗುತ್ತು, ನೂತನ ರಥ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಆಳ್ವ ತೇವುನಾಡುಗುತ್ತು , ರಾಮದಾಸ್ ಆಳ್ವ ತೇವುನಾಡುಗುತ್ತು, ನಂದಿನಿ ರಘು ಶೆಟ್ಟಿ ಗುರಿಕಾರಮೂಲೆ, ಸಾಂಸ್ಕೃತಿಕ ಸಮಿತಿ ಸಂಚಾಲಕ ಸುಕೇಶ್ ಮಂಜನಾಡಿ , ವಸಂತ ಕೋಡಿ ಉಪಸ್ಥಿತರಿದ್ದರು.


