ಮೂಡುಬಿದಿರೆ: ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಮಿಜಾರು ಪ್ರಾಥಮಿಕ ವಿಭಾಗದ ಎಲ್ಕೆಜಿ ಮತ್ತು ಯುಕೆಜಿ ವಿದ್ಯಾರ್ಥಿಗಳಲ್ಲಿ ಬಣ್ಣಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸಂಭ್ರಮದ ‘ರೆಡ್ ಡೇ’ (ಕೆಂಪು ದಿನಾಚರಣೆ) ಆಚರಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ನಾಗರತ್ನ ಶಿರೂರು ಕಾರ್ಯಕ್ರಮ ಉದ್ಘಾಟಿಸಿದರು.ಆ ದಿನ ಎಲ್ಲಾ ಮಕ್ಕಳು ಕೆಂಪು ಬಣ್ಣದ ಉಡುಪು ಧರಿಸಿ ಗಮನ ಸೆಳೆದರು. ಕಾರ್ಯಕ್ರಮದ ಅಂಗವಾಗಿ ಕೆಂಪು ಬಣ್ಣದ ತಿಂಡಿ–ತಿನಿಸುಗಳು, ತಂಪು ಪಾನೀಯಗಳು, ಹಣ್ಣುಗಳು, ಹೂವುಗಳು, ತರಕಾರಿಗಳು ಹಾಗೂ ವಿವಿಧ ವಸ್ತುಗಳನ್ನು ಪ್ರದರ್ಶಿಸಿ ಮಕ್ಕಳಿಗೆ ಬಣ್ಣದ ಮಹತ್ವ ಮತ್ತು ಗುರುತಿನ ಕುರಿತು ತಿಳಿಸಿಕೊಡಲಾಯಿತು.

ಕಾರ್ಯಕ್ರಮದ ಯಶಸ್ವಿಗೆ ಶಿಕ್ಷಕರಾದ ಚೈತ್ರ, ಹೇಮಾವತಿ ಹಾಗೂ ಸಹಾಯಕಿಯರಾದ ಮಮತಾ, ಪವಿತ್ರ ಸೇರಿದಂತೆ ಎಲ್ಲಾ ಶಿಕ್ಷಕ ವೃಂದ ಸಹಕರಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕಿ ಗೀತಾ ಸ್ವಾಗತಿಸಿದರು. ಪ್ರೇಮ ವಂದಿಸಿದರು. ಪವಿತ್ರ ಹಾಗೂ ರೇಖಾ ಕಾರ್ಯಕ್ರಮ ನಿರೂಪಿಸಿದರು.



