
ಚಿತ್ರ: ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಶ್ರೀ ಕ್ಷೇತ್ರ ಕುತ್ತಾರು ಇಲ್ಲಿ ಜರಗಿದ 39 ನೇ ವರ್ಷದ ಸಾರ್ವಜನಿಕ ಕುತ್ತಾರು ಗಣೇಶೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ವೇದಿಕೆಯಲ್ಲಿ ಜರಗಿದ ಧಾರ್ಮಿಕ ಸಭೆಯನ್ನು ನಿವೃತ್ತ ಅಧಿಕಾರಿ ರತ್ನಾಕರ್ ಗಟ್ಟಿ ಉದ್ಘಾಟಿಸಿದರು.
ಸತ್ಯದತ್ತ ಸಾಗುವ ಪ್ರೇರಣೆಯಾದ ಕೇಂದ್ರವೇ ಧರ್ಮ : ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ
ಉಳ್ಳಾಲ: ಮರಣವನ್ನು ಪ್ರಾಮಾಣಿಕವಾಗಿ ಎದುರಿಸುವ ಮನೋಬಲವೇ ಮಾನವನ ಸತ್ಯ ಪರೀಕ್ಷೆ. ರಹಸ್ಯಗಳನ್ನು ಬೇಧಿಸಿ ಅರಿಯುವುದೇ ವಿಜ್ಞಾನ, ಆದರೆ ಅದರ ಪಾರಮಾರ್ಥಿಕ ವ್ಯವಸ್ಥೆಯನ್ನು ನಿರ್ಮಿಸಿರುವುದು ದೇವರು. ಬ್ರಹ್ಮಾಂಡದ ಸೂಕ್ಷ್ಮ ನಿಯಮಗಳನ್ನು ರೂಪಿಸಿದ ಶಕ್ತಿ ದೇವರದೇ. ಭಾರತವು ಹಿಂದೂ ಧರ್ಮದ ಆಳವಾದ ತತ್ವಗಳಿಂದ ಜಗತ್ತಿಗೆ ಗುರುವಾಗಿದ್ದ ದೇಶ. ಈ ಧರ್ಮವು ಮನುಕುಲಕ್ಕೆ ಜ್ಞಾನ, ಶಕ್ತಿ ಮತ್ತು ಆಧ್ಯಾತ್ಮಿಕ ದಾರಿ ತೋರಿಸಿತು. ಎಲ್ಲರಿಗೂ ಶಕ್ತಿ ನೀಡುವ, ಸತ್ಯದತ್ತ ಸಾಗುವ ಪ್ರೇರಣೆಯಾದ ಕೇಂದ್ರವೇ ಧರ್ಮ. ಅದನ್ನು ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕುತ್ತಾರು ಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಕುತ್ತಾರಗುತ್ತು ಹೇಳಿದರು.

ಅವರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಶ್ರೀ ಕ್ಷೇತ್ರ ಕುತ್ತಾರು ಇಲ್ಲಿ ಜರಗಿದ 39 ನೇ ವರ್ಷದ ಸಾರ್ವಜನಿಕ ಕುತ್ತಾರು ಗಣೇಶೋತ್ಸವದ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ವೇದಿಕೆಯಲ್ಲಿ ಜರಗಿದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಂಗಳೂರು ಮಂಡಲ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮಾತನಾಡಿ, ದೇವಾಲಯವು ಹಿಂದೂ ಸಮಾಜಕ್ಕೆ ಧಾರ್ಮಿಕ ಶಕ್ತಿಯ ಕೇಂದ್ರವಾಗಬೇಕು. ಆಡಳಿತ ಮಂಡಳಿ ಜೀರ್ಣೋದ್ದಾರ ಕಾರ್ಯಗಳಿಗೆ ಕೈ ಹಾಕಿದರೆ, ಎಲ್ಲರೂ ಕೈಜೋಡಿಸಿ ಸಹಕಾರ ನೀಡುವಂತಾಗಲಿ. ಇಂದು ಧರ್ಮದ ಆಚರಣೆಗಳಲ್ಲಿ ತಪ್ಪುಗಳು ನಡೆದರೂ ಯಾರೂ ಸ್ವರ ಎತ್ತುವುದಿಲ್ಲ. ತಾಯಂದಿರೇ ಮನೆಯ ಮಕ್ಕಳಿಗೆ ಧರ್ಮದ ಗೌರವ, ಸಾಂಪ್ರದಾಯಿಕ ಮೌಲ್ಯಗಳು ಮತ್ತು ವಿರೋಧ ವ್ಯಕ್ತಪಡಿಸುವ ಕನಿಷ್ಠ ಭಾವನೆಗಳನ್ನು ಕಲಿಸಬೇಕಾಗಿದೆ. ದೇವಾಲಯವು ಹಿಂದೂಗಳಿಗೆ ಶಕ್ತಿ, ಪ್ರೇರಣೆ ಮತ್ತು ಒಗ್ಗಟ್ಟು ಕೊಡುವ ಕೇಂದ್ರವಾಗಲಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಎಸ್ ಆರ್ ಟಿಸಿ ನಿವೃತ್ತ ಅಧಿಕಾರಿ ರತ್ನಾಕರ್ ಗಟ್ಟಿ ಮಂಗಳೂರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವ ಪದ್ಧತಿ ಇರಲಿಲ್ಲ. ಆ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿದ್ದು, ಜಾತಿ ಪದ್ಧತಿ ಜನರನ್ನು ವಿಭಜಿಸಿತ್ತು. ಇಂತಹ ಸಂದರ್ಭದಲ್ಲಿ ಶಿವಾಜಿ ಮಹಾರಾಜರು ಗಣೇಶೋತ್ಸವವನ್ನು ಪ್ರಾರಂಭಿಸಿ, ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಮಹಾರಾಷ್ಟ್ರದಲ್ಲಿ ಬಾಲ ಗಂಗಾಧರ ತಿಲಕ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವವು ವ್ಯಾಪಕವಾದ ಚಳವಳಿಯಾಯಿತು. ಇಂದಿಗೂ ಹಳ್ಳಿ ಹಳ್ಳಿಯಲ್ಲೂ ಗಣೇಶೋತ್ಸವಗಳು ಭವ್ಯವಾಗಿ ನಡೆಯುತ್ತಿವೆ. ಎಲ್ಲರು ಒಟ್ಟಾಗಿ ಸೇರಿ, ಜಾತಿ-ಬಾಂಧವ್ಯವಿಲ್ಲದೆ, ಪರಸ್ಪರ ಸಹಕಾರದಿಂದ ಉತ್ಸವವನ್ನು ಆಚರಿಸುತ್ತಿದ್ದಾರೆ. ಮದುವೆ, ಆರ್ಥಿಕ ಕಷ್ಟ, ಹಿಂದುಳಿದವರ ನೆರವು ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸಹ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಒಂದು ವೇದಿಕೆಯಾಗಿದೆ. ಈ ಉತ್ಸವದಿಂದ ಸಮಾಜದಲ್ಲಿ ಒಗ್ಗಟ್ಟು ಬಲವಾಗುತ್ತಿದ್ದು, ವಿಘ್ನಗಳನ್ನು ದೂರ ಮಾಡಿ, ಸಕಾರಾತ್ಮಕ ಶಕ್ತಿ ಹರಡುವ ಕಾರ್ಯ ನಡೆಯುತ್ತಿದೆ ಎಂದರು.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿ, ಸಮಾಜದಲ್ಲಿ ಬೆವರಿಳಿಸಿ ದೇವಸ್ಥಾನಗಳನ್ನು ನಿರ್ಮಿಸಿದ ಹಿರಿಯರಿದ್ದಾರೆ. ಆದರೆ ದೇವಸ್ಥಾನಗಳು ಕೇವಲ ಕಟ್ಟಡಗಳಾಗದೇ, ದೇವರ ಸೇವೆಯೊಂದಿಗೆ ಸಮಾಜ ಸೇವೆಯ ಕೇಂದ್ರವಾಗಬೇಕು. ಪ್ರತಿ ಸದಸ್ಯರೂ ತಮ್ಮ ಶಕ್ತಿಗೆ ತಕ್ಕಂತೆ ಕ್ಷೇತ್ರದ ಎಲ್ಲಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಮಂಜನಾಡಿ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರ ಉತ್ತರಕ್ರಿಯೆಯ ಕಾರ್ಯವನ್ನು ಎಲ್ಲಾ ಸದಸ್ಯರು ತಾವೇ ವೆಚ್ಚವನ್ನು ಭರಿಸಿ ನಡೆಸಿರುವ ಸಮಾಜಮುಖಿ ಕಾರ್ಯ ಶ್ಲಾಘನೀಯ ಎಂದರು.
ಮೈಸೂರ್ ಇಲೆಕ್ಟ್ರಿಕಲ್ಸ್ ಮಾಜಿ ಅಧ್ಯಕ್ಷರು ಸಂತೋಷ್ ಕುಮಾರ್ ರೈ ಬೋಳಿಯಾರು,, ಉಳ್ಳಾಲಬೈಲ್ ವೈದ್ಯನಾಥ ದೈವಸ್ಥಾನದ ಅಧ್ಯಕ್ಷ ಪ್ರವೀಣ್ ಕುಮಾರ್ ಯು., ಸೋಮೇಶ್ವರ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಪರ್ಯತ್ತೂರು, ತೊಕ್ಕೊಟ್ಟುವಿನ ಡಾ.ಗಣೇಶ್ ಕುಮಾರ್ ಉದ್ಯಮಿಗಳಾದ ಸುಚಿವೃತ ಶೆಟ್ಟಿ, , ವಿವೇಕ್ ಶೆಟ್ಟಿ ಗಣೇಶ್ ಕೆ.ಟಿ. ಮುಖ್ಯ ಅತಿಥಿಗಳಾಗಿದ್ದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಚಂದ್ರಹಾಸ ಕೊಟ್ಟಾರಿ, ಅಧ್ಯಕ್ಷರಾದ ರಾಜೇಶ್ ಅತ್ತಾವರ ಉಪಸ್ಥಿತರಿದ್ದರು. ಪುಷ್ಪರಾಜ್ ಸನಿಲ್, ಉಪಾಧ್ಯಕ್ಷ ಜಗನ್ನಾಥ ಸಾಲಿಯಾನ್, ಕಾರ್ಯದರ್ಶಿ ಮಾಧವ ಬಂಗೇರ, ಸಂಘಟನಾ ಕಾರ್ಯದರ್ಶಿ ಗೌತಮ್ ಸುವರ್ಣ ಭಾಗವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಪವಿತ್ರಕುಮಾರ್ ಗಟ್ಟಿ ಸ್ವಾಗತಿಸಿದರು. ಹರೀಶ್ ಆಚಾರ್ಯ ನಿರೂಪಿಸಿದರು. ಶಶಿಕಲಾ ಗಟ್ಟಿ ಪ್ರಶಸ್ತಿ ವಿಜೇತರ ವಿವರ ಓದಿದರು. ಸುನಿತಾ ಗಟ್ಟಿ ವಂದಿಸಿದರು.