ಮಂಗಳೂರು:ಜೂ.22- ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜಿ ತ್ವಾಕ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಎಸ್ ಡಿ ಪಿ ಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಖಾಝಿಯವರಾದ ಅಲ್ ಹಾಜ್ ತ್ವಾಕ ಮುಸ್ಲಿಯಾರ್ ರವರು ಮರಣ ವಾರ್ತೆಯ ಸುದ್ದಿಯು ಅತೀವ ನೋವನ್ನುಂಟು ಮಾಡಿದೆ. ಕೇರಳ ಮತ್ತು ಕರಾವಳಿ ಕರ್ನಾಟಕದ ನೂರಾರು ಮೊಹಲ್ಲಾಗಳ ಖಾಝಿಯಾಗಿದ್ದ ಉಸ್ತಾದರು ಇಸ್ಲಾಮಿನ ಖ್ಯಾತ ಕರ್ಮಶಾಸ್ತ್ರ ಪಂಡಿತರಾಗಿದ್ದರು. ಸುಮಾರು ಹದಿನಾರು ವರ್ಷಗಳಿಂದ ಮಂಗಳೂರು ಖಾಝಿಯಾಗಿದ್ದ ಇವರು ತನ್ನ ಅಧಿಕಾರವಧಿಯಲ್ಲಿ ಧಾರ್ಮಿಕ ವಿಚಾರಗಳಿಗೆ ಮಾತ್ರ ಸೀಮಿತವಾಗದೆ ಸಮುದಾಯದ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮೂಡಿಸಿದ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದರು. ಒಂದು ಕಾಲದಲ್ಲಿ ಸಮುದಾಯದಲ್ಲಿ ಬೇರುಬಿಟ್ಟಿದ್ದ ವರದಕ್ಷಿಣೆ ವಿರುದ್ಧ ದೊಡ್ಡ ಮಟ್ಟದ ಆಂದೋಲನ ನಡೆಸಿ ಯಶಸ್ವಿಯಾಗಿದ್ದರು. 2012 ರಲ್ಲಿ ಕಾಶಿಪಟ್ನ ಎಂಬ ಕುಗ್ರಾಮದಲ್ಲಿ ದಾರುಲ್ ನೂರ್ ಎಂಬ ವಿದ್ಯಾ ಸಂಸ್ಥೆಯನ್ನು ಹುಟ್ಟುಹಾಕಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ತ್ವಾಕಾ ಮುಸ್ಲಿಯಾರ್ ರವರು ಸಮಾಜ ಮತ್ತು ಸಮುದಾಯಕ್ಕೆ ಮಾದರಿ ನಾಯಕತ್ವವನ್ನು ನೀಡಿದವರು.

ಕೇರಳದಲ್ಲಿ ಧಾರ್ಮಿಕ ಮತ್ತು ಲೌಖಿಕ ವಿದ್ಯಾಭ್ಯಾಸದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕೆ ಈಜಿಫ್ಟಿನ ವಿಶ್ವ ವಿಖ್ಯಾತ ವಿದ್ಯಾ ಸಂಸ್ಥೆಯಾದ ಅಲ್ ಅಝ್ಹರ್ ಯೂನಿವರ್ಸಿಟಿ ಯಲ್ಲಿ ಉಝುವುಲ್ ಫಿಕ್ಹ್ ವಿಷಯದಲ್ಲಿ ಸ್ನಾನಕೋತ್ತರ ಪದವಿಯೊಂದಿಗೆ ಪ್ರತಿಷ್ಠಿತ ಅಲ್ ಅಝ್ಹರಿ ಬಿರುದು ಪಡೆದರು. ಬಳಿಕ ಸುಮಾರು ಇಪ್ಪತೆಂಟು ವರ್ಷಗಳ ಕಾಲ ವಿದೇಶಗಳಲ್ಲಿ ಸೇವೆ ಸಲ್ಲಿಸಿದ ತ್ವಾಕಾ ಮುಸ್ಲಿಯಾರ್ ರವರು ಧಾರ್ಮಿಕ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಳು ಅಪಾರವಾಗಿದೆ. ತ್ವಾಕಾ ಮುಸ್ಲಿಯಾರ್ ರವರ ಸತ್ಕರ್ಮಗಳನ್ನು ಅಲ್ಲಾಹನು ಸ್ವೀಕರಿಸಿ ಪರಲೋಕ ಜೀವನವನ್ನು ಶ್ರೇಷ್ಠ ಗೊಳಿಸಲಿ ಎಂದು ಪ್ರಾರ್ಥಿಸುತ್ತಾ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.


