ಮೂಡುಬಿದಿರೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ಮಿಜಾರು ಹಾಗೂ ಸರಕಾರಿ ಪದವಿಪೂರ್ವ ಕಾಲೇಜು, ತೆಂಕಮಿಜಾರು ಇಲ್ಲಿಗೆ ವಿವೇಕ ಯೋಜನೆಯಡಿ ಮಂಜೂರಾದ 3 ಕೊಠಡಿಗಳನ್ನು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಬುಧವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ವಿವೇಕ ಯೋಜನೆಯಡಿ ವಿವಿಧ ಶಾಲೆಗಳಿಗೆ ಕೊಠಡಿಗಳನ್ನು ನೀಡಲಾಗಿದೆ. ಶಾಲೆಗಳಿಗೆ ಅನುದಾನವನ್ನು ಒದಗಿಸಿ ಅಭಿವೃದ್ಧಿಗೊಳಿಸಲಾಗುತ್ತಿದೆ ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಫಲಿತಾಂಶವೂ ಶೇ. 100 ಬರಬೇಕು. ಶಾಲೆಯು ಕೆಪಿಎಸ್ ಆಗಿರುವುದರಿಂದ ಮುಂದೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪ. ಪೂ. ಕಾಲೇಜು ಒಂದೇ ಕ್ಯಾಂಪಸ್ ನಲ್ಲಿ ಬರಲಿದೆ ಎಂದರು. ತೆಂಕಮಿಜಾರು ಗ್ರಾ. ಪಂ. ಅಧ್ಯಕ್ಷೆ ಶಾಲಿನಿ ಕೆ. ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು.

ತೆಂಕಮಿಜಾರು ಗ್ರಾ. ಪಂ. ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಸದಸ್ಯೆ ಗೀತಾ, ಇರುವೈಲು ಗ್ರಾ. ಪಂ. ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ, ಅಶೋಕ್ ಶೆಟ್ಟಿ ತೋಡಾರು ದಯಾನಂದ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಂಶುಪಾಲ ಎಂ. ಎನ್. ಚಂದ್ರು, ಪ್ರಾಥಮಿಕ ಶಾಲಾ ಶಿಕ್ಷಕಿ ನಾಗರತ್ನ ಉಪಸ್ಥಿತರಿದ್ದರು.



